ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಸಮೀಪದ ನಾಗತಾತನ ದೊಡ್ಡಿ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುವ ಜನರು ಕಾಡಾನೆಗಳಿಗೆ ಹೆದರಿಕೊಂಡು ಜೀವನ ಸಾಗಿಸುವಂತಾಗಿದೆ.
ಈಗಾಗಲೇ ಅರಣ್ಯ ಪ್ರದೇಶದಿಂದ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನು ತಿಂದು ತುಳಿದು ನಾಶ ಮಾಡುತ್ತಿವೆ. ಅಷ್ಟೇ ಅಲ್ಲದೆ ರೈತರ ಜಮೀನಿನಲ್ಲಿ ಬೀಡು ಬಿಡುತ್ತಿರುವುದರಿಂದ ಯಾವಾಗ ನಮ್ಮ ಮೇಲೆ ದಾಳಿ ಮಾಡಿ ಬಿಡುತ್ತವೆಯೇನೋ ಎಂಬ ಭಯವೂ ರೈತರನ್ನು ಕಾಡಲಾರಂಭಿಸಿದೆ.
ಕೋವಿಡ್ ನಂತರ ಪರಿಸ್ಥಿತಿ ಸುಧಾರಿಸಿರುವುದರಿಂದ ರೈತರು ಕೃಷಿಯತ್ತ ತೊಡಗಿಸಿಕೊಂಡಿದ್ದು ಸಾಲಸೋಲ ಮಾಡಿ ಹಣ ತಂದು ಕೃಷಿ ಮಾಡುತ್ತಿದ್ದಾರೆ. ಇಂತಹ ಸಂದರ್ಭ ಕಾಡಾನೆಗಳು ಜಮೀನಿಗೆ ನುಗ್ಗಿದರೆ ಕಷ್ಟ ಪಟ್ಟು ಮಾಡಿದ ಕೃಷಿ ಬೆಳೆಗಳು ನಾಶವಾಗಿ ಮಾಡಿದ ಸಾಲ ತೀರಿಸಲಾಗದೆ ಸಾಲಗಾರರಾಗಿ ಬದುಕಬೇಕಾಗುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇನ್ನು ನಾಗತಾತನ ದೊಡ್ಡಿ ಗ್ರಾಮದ ಚಂದ್ರಪ್ಪ ಎಂಬವರು ಗ್ರಾಮದ ಹೊರವಲಯದಲ್ಲಿ ಜಮೀನನ್ನು ಹೊಂದಿದ್ದು, ಚೆಂಡು ಹೂ ಹಾಗೂ ರಾಗಿಯನ್ನು ಬೆಳೆದಿದ್ದರು. ಆದರೆ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ ಫಸಲನ್ನು ತುಳಿದು ನಾಶಪಡಿಸಿದೆ. ಇದರಿಂದ ಸಾವಿರಾರು ನಷ್ಟವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಮೂಲಕ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಈ ಭಾಗದಲ್ಲಿ ಹಲವು ರೈತರು ಜಮೀನನ್ನು ಹೊಂದಿದ್ದು, ಕೃಷಿ ಮಾಡುತ್ತಿದ್ದಾರೆ. ಆದರೆ ಈ ಭಾಗದಲ್ಲಿನ ಕಾಡಾನೆಗಳು ಆಗ್ಗಾಗ್ಗೆ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ನಷ್ಟವನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮತ್ತಷ್ಟು ತೊಂದರೆಯನ್ನು ಪಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಮುಂದಾದರೂ ಇತ್ತ ಗಮನಹರಿಸಿ ಆನೆಗಳ ಲಗ್ಗೆಗೆ ಕಡಿವಾಣ ಹಾಕುವಂತೆಯೂ ಗ್ರಾಮದ ರೈತರು ಒತ್ತಾಯಿಸಿದ್ದಾರೆ.