ಹನೂರು: ಬೈಕ್ನಲ್ಲಿ ಗಾರೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ಬೋರೆದೊಡ್ಡಿ ಬಳಿ ನಡೆದಿದೆ.
ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದ ಮಹದೇವಯ್ಯ (40) ಎಂಬಾತನೇ ಸಾವನ್ನಪ್ಪಿರುವ ದುರ್ದೈವಿ. ನಿಂಗರಾಜು (70) ಗಾಯಗೊಂಡ ವ್ಯಕ್ತಿ. ಇವರು ಪಿ.ಜಿ ಪಾಳ್ಯ ಗ್ರಾಮಕ್ಕೆ ಗಾರೆ ಕೆಲಸಕ್ಕೆಂದು ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೋರೆದೊಡ್ಡಿ ಬಳಿ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ಮಹದೇವಯ್ಯ ತೀವ್ರ ಗಾಯಗೊಂಡರೆ ನಿಂಗರಾಜುಗೆ ತಲೆ ಹಾಗೂ ಕೈಗೆ ಸಣ್ಣಪುಟ್ಟ ಗಾಯಗಳಾದವು. ಈ ವೇಳೆ ಸಾರ್ವಜನಿಕರು ಗಾಯಾಳು ಮಹದೇವಯ್ಯನನ್ನು ಲೊಕ್ಕನಹಳ್ಳಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹನೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ. ಈ ಸಂಬಂಧ ತನಿಖೆ ಕೈಗೊಂಡಿರುವ ಪೊಲಿಸರು ಪರಾರಿಯಾಗಿರುವ ಕಾರಿನ ಪತ್ತೆಗೆ ಬಲೆ ಬೀಸಿದ್ದಾರೆ.