ಗುಂಡ್ಲುಪೇಟೆ: ಬೇಸಿಗೆಯ ದಿನಗಳಲ್ಲಿ ಒಂದಲ್ಲ ಒಂದು ರೀತಿಯ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು, ಅಲ್ಲಲ್ಲಿ ಬೆಳೆದು ನಿಂತ ಕಬ್ಬಿನ ಗದ್ದೆಗಳು ಬೆಂಕಿಗಾಹುತಿಯಾಗುವುದು ಮಾಮೂಲಿಯಾಗಿದೆ.
ಇದೀಗ ತಾಲ್ಲೂಕಿನ ಕುಂದಕೆರೆ ಗ್ರಾಮದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಕಷ್ಟಪಟ್ಟು ಸಾಲ ಮಾಡಿ ಕೃಷಿ ಮಾಡಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಇದಕ್ಕೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ.
ವಿದ್ಯುತ್ ತಂತಿ ಬಿದ್ದ ಪರಿಣಾಮ ಬೆಂಕಿ ತಗುಲಿ ಗ್ರಾಮದ ನಿವಾಸಿ ರಾಜೇಂದ್ರ ಎಂಬುವರು ಬೆಳೆದ ಕಬ್ಬಿನ ಗದ್ದೆ ಹೊತ್ತಿ ಉರಿದಿದ್ದು ಪರಿಣಾಮ ಲಕ್ಷಾಂತರ ರೂಪಾಯಿಯ ಕಬ್ಬು ಬೆಳೆ ನಾಶವಾಗಿದೆ. ಜತೆಗೆ ನೀರು ಹಾಯಿಸಲು ಅಳವಡಿಸಿದ್ದ ಲಕ್ಷಾಂತರ ರೂ. ಮೌಲ್ಯದ ಡ್ರಿಪ್ ಪೈಪ್ ಗಳು ಸುಟ್ಟುಕರಕಲಾಗಿದೆ. ಇಷ್ಟೇ ಅಲ್ಲದೆ ಪಕ್ಕದ ಜಮೀನಿನ ನಾಗಮಲ್ಲಪ್ಪ ಎಂಬುವರು ಬೆಳೆದಿದ್ದ ಬಾಳೆ ಬೆಳೆಯು ಸುಟ್ಟು ಹೋಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೈತರು ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.