ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ವರ್ಷಗಳ ಬಳಿಕ ಕರಿಚಿರತೆ ಪ್ರತ್ಯಕ್ಷವಾಗಿದ್ದು, ಈ ವಿಚಾರ ಪರಿಸರ ಪ್ರೇಮಿಗಳನ್ನು ಪುಳಕಗೊಳಿಸಿದೆ.
ಇದುವರೆಗೆ ಈ ಕರಿಚಿರತೆ ಸಾರ್ವಜನಿಕರ ಕಣ್ಣಿಗೆ ಬಿದ್ದಿಲ್ಲವಾದರೂ ಈ ಹಿಂದೆ 2020 ರ ಆಗಸ್ಟ್ನಲ್ಲಿ ಬಿಆರ್ಟಿಯ ಬೈಲೂರು ವಲಯದಲ್ಲಿ ಕಪ್ಪು ಚಿರತೆ ಕ್ಯಾಮೆರಾ ಟ್ರ್ಯಾಪ್ನಲ್ಲಿ ಸೆರೆಯಾಗಿತ್ತು. ಅದೇ ವರ್ಷದ ಡಿಸೆಂಬರ್ನಲ್ಲಿ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯದಲ್ಲೂ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ನಲ್ಲಿ ಕರಿ ಚಿರತೆ ಕಂಡು ಬಂದಿತ್ತು .
ಈಗ ಹೊಳೆಮತ್ತಿ ನೇಚರ್ ಫೌಂಡೇಶನ್ ಡಾ.ಸಂಜಯ್ ಗುಬ್ಬಿ ಮತ್ತು ತಂಡದವರು ಬಿಳಿಗಿರಿರಂಗನಬೆಟ್ಟದಲ್ಲಿ ಚಿರತೆಗಳಿಗೆ ಸಂಬಂಧಿತ ಅಧ್ಯಯನಕ್ಕಾಗಿ ನಡೆಸಿದ್ದ ಕ್ಯಾಮರಾ ಟ್ರ್ಯಾಪ್ನಲ್ಲಿ ಮತ್ತೆ ಗೋಚರಿಸಿದೆ . ಡಿಸೆಂಬರ್ 2020 ರಲ್ಲಿ ಇದೇ ಗಂಡು ಚಿರತೆ ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು . ಈ ಗಂಡು ಚಿರತೆಗೆ ಆರು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ .
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಈ ಕಾರಿಡಾರ್ನ ಸಂರಕ್ಷಿಸುವ ಅಗತ್ಯವಿದೆ. ಈ ಕಿರಿದಾದ ಕಾರಿಡಾರ್ ಮೂಲಕ ಕೊಳ್ಳೇಗಾಲ – ಹಾಸನೂರು ರಸ್ತೆ ( ರಾಜ್ಯ ಹೆದ್ದಾರಿ -38 ) ಹಾದು ಹೋಗುತ್ತದೆ ಮತ್ತು ರಸ್ತೆಯಲ್ಲಿನ ವಾಹನ ದಟ್ಟಣೆ ವನ್ಯಜೀವಿಗಳ ಓಡಾಟಕ್ಕೆ ಅಡ್ಡಿಯಾಗಿದೆ.