ಚಾಮರಾಜನಗರ: ಓಡಿ ಹೋಗಿ ಮದುವೆಯಾಗಿದ್ದ ಜೋಡಿಗಳು ಇದೀಗ ನಮಗೆ ಜೀವಬೆದರಿಕೆಯಿದ್ದು ರಕ್ಷಣೆ ನೀಡುವಂತೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯ ಕೊಳ್ಳೇಗಾಲ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹುತ್ತೂರು ಗ್ರಾಮದ ಪವಿತ್ರ ಹಾಗೂ ಪಿ.ಜಿ.ಪಾಳ್ಯ ಗ್ರಾಮದ ಪ್ರೇಮ್ ಕುಮಾರ್ ಎಂಬುವರೇ ಪೊಲೀಸ್ ಠಾಣೆ ಮೆಟ್ಟಿಲೇರಿದವರು. ಇವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರು ಬೇರೆ ಬೇರೆ ಸಮುದಾಯದವರಾಗಿದ್ದರಿಂದ ಮದುವೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತಲ್ಲದೆ, ಪವಿತ್ರಾಳಿಗೆ ಮನೆಯಲ್ಲಿ ಬೇರೊಬ್ಬ ಯುವಕನ ಜತೆ ಮದುವೆ ಗೊತ್ತು ಮಾಡಿದ್ದರು. ಈ ನಡುವೆ ಪವಿತ್ರಾ ಪ್ರಿವೆಡ್ಡಿಂಗ್ ನೆಪದಲ್ಲಿ ಮನೆಯಿಂದ ಹೊರಬಂದಿದ್ದು, ತನ್ನ ಪ್ರಿಯಕರ ಪ್ರೇಮ್ ಕುಮಾರ್ ನನ್ನು ಫೋನ್ ನಲ್ಲಿ ಸಂಪರ್ಕಿಸಿ ಗುಂಡಾಲ್ ಜಲಾಶಯಕ್ಕೆ ಕರೆಯಿಸಿಕೊಂಡಿದ್ದು ಆ ನಂತರ ಇಬ್ಬರು ಅಲ್ಲಿಂದ ಓಡಿ ಹೋಗಿ ರಾಮನಗರದಲ್ಲಿ ಮದುವೆ ಮಾಡಿಕೊಂಡಿದ್ದರು.
ಈ ಸಂಬಂಧ ಪವಿತ್ರ ಮನೆಯವರು ಪೊಲೀಸ್ ಠಾಣೆಗೆ ಮಗಳನ್ನು ಬಲವಂತವಾಗಿ ಎಳೆದೊಯ್ಯಲಾಗಿದೆ ಎಂದು ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಾಹವಾಗಿದ್ದ ಪ್ರೇಮಿಗಳಿಬ್ಬರನ್ನು ಪೊಲೀಸ್ ಠಾಣೆಗೆ ಕರೆಯಿಸಿಕೊಂಡಿದ್ದರು. ವಿಚಾರಣೆ ನಡೆಸಿದ ವೇಳೆ ಪವಿತ್ರ ನನ್ನನ್ನು ಬಲವಂತಾಗಿ ಕರೆದೊಯ್ದಿಲ್ಲ ನಾನು ಪ್ರೇಮ್ ಕುಮಾರ್ ನನ್ನು ಮದುವೆಯಾಗಿರುವುದಾಗಿ ಹೇಳಿದ್ದಳು. ಇದಕ್ಕೆ ಈಕೆಯ ಪೋಷಕರು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದರು. ಆದರೆ ಇದೀಗ ಪವಿತ್ರಾಳ ಪೋಷಕರು ತಿರುಗಿಬಿದ್ದಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ನವದಂಪತಿಗಳು ಇದೀಗ ಪೊಲೀಸರ ಮೊರೆ ಹೋಗಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.