ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ಸರ್ವೆ ಕಾರ್ಯದ ಮೂಲಕ ಗಡಿ ಗುರುತಿಸಿ ಜೆಸಿಬಿ ಯಂತ್ರದ ಗರ್ಜನೆಯೊಂದಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಭೂಮಾಪನ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಏ.27 ರಂದು ಜೆಸಿಬಿಗಳೊಂದಿಗೆ ಒತ್ತುವರಿಯಾಗಿದ್ದ ಸ್ಥಳಕ್ಕೆ ತೆರಳಿ ಸರ್ವೆ ಮಾಡುವ ಮೂಲಕ ಯಶಸ್ವಿಯಾಗಿ ತೆರವುಗೊಳಿಸಿ ಅಭಿವೃದ್ಧಿಗಾಗಿ ಸ್ಥಳೀಯ ಗ್ರಾ.ಪಂ ಗಳಿಗೆ ಹಸ್ತಾಂತರಿಸಿದ್ದಾರೆ.
ತಾಲ್ಲೂಕಿನಾದ್ಯಂತ ಸರ್ಕಾರಿ ಜಾಗಗಳು ಪ್ರಮುಖವಾಗಿ ಕೆರೆಕಟ್ಟೆಗಳು ಒತ್ತುವರಿಯಾಗಿರುವ ಬಗ್ಗೆ ಬಹಳ ವರ್ಷಗಳಿಂದಲೂ ದೂರುಗಳು ಕೇಳಿಬರುತ್ತಿದ್ದು ಸರ್ವೆ ನಡೆಸುವ ಮೂಲಕ ತೆರವಿಗೆ ಮುಂದಾಗಿದ್ದರು ಸಫಲವಾಗದೆ ತೆರವು ಕಾರ್ಯ ವಿಳಂಬವಾಗಿತ್ತು, ಶಾಸಕ ಕೆ ಮಹದೇವ್ ಅವರ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತರಾದ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ ಹಾಗೂ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರು ಸಭೆ ನಡೆಸಿ ಏ.27 ರಂದು ಮೊದಲ ಹಂತದ ಒತ್ತುವರಿ ತೆರವಿಗೆ ದಿನಾಂಕ ನಿಗದಿಪಡಿಸಿ ಮೊದಲ ಹಂತವಾಗಿ 6 ಗ್ರಾ.ಪಂ ವ್ಯಾಪ್ತಿಯ 20 ಕೆರೆ ಕಟ್ಟೆಗಳ ತೆರವು ಕಾರ್ಯಾಚರಣೆ ನಡೆಸಿ 7 ಎಕರೆ 30 ಗುಂಟೆ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಮೂಲಕ ಸ್ಥಳೀಯ ಗ್ರಾ.ಪಂ ಗಳಿಗೆ ಅಭಿವೃದ್ಧಿಗಾಗಿ ಹಸ್ತಾಂತರಿಸಿದ್ದಾರೆ, ಉಳಿದ ಕೆರೆ ಕಟ್ಟೆಗಳ ತೆರವಿಗೆ ವಾರದ ಗಡುವು ನೀಡಿ ಮೇ.4 ರಂದು ಎರಡನೇ ಹಂತದ ಕಾರ್ಯಾಚರಣೆ ನಡೆಯಲಿದೆ.
ಮಾಲಂಗಿ ಗ್ರಾ.ಪಂ ವ್ಯಾಪ್ತಿಯ ಹುಣಸೆಕುಪ್ಪೆ ಗ್ರಾಮದ ಕೆರೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ ಇಒ ಸಿ.ಆರ್ ಕೃಷ್ಣಕುಮಾರ್ ಅವರು ಒತ್ತುವರಿ ತೆರವು ಕಾರ್ಯ ವೀಕ್ಷಿಸಿ ಮಾತನಾಡಿ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಹಲವು ಬಾರಿ ಸೂಚನೆಗಳನ್ನು ನೀಡಿ ತೆರವು ಮಾಡುವಂತೆ ಹೇಳಿದರೂ ಸಹ ಕ್ಯಾರೇ ಎನ್ನದವರಿಗೆ ಜೆಸಿಬಿ ಯಂತ್ರಗಳನ್ನು ಸ್ಥಳಕ್ಕೆ ಕೊಂಡೊಯ್ದು ಅಧಿಕಾರಿಗಳ ಮೂಲಕ ಸರ್ವೆ ಕಾರ್ಯ ನಡೆಸಿ ಒತ್ತುವರಿ ಸ್ಥಳ ಗುರುತಿಸಿದ ನಂತರ ಕಾಲುವೆ ಮಾಡಿ ಗಡಿ ಗುರುತಿಸಿ ಸ್ಥಳೀಯ ಗ್ರಾ.ಪಂ ಗಳ ಮೂಲಕ ಏರಿ ರಿಪೇರಿ, ಕೋಡಿ ಹಾಗೂ ತೂಬು ನಿರ್ಮಾಣ, ಹೂಳೆತ್ತುವ ಮೂಲಕ ಸಮಗ್ರ ಅಭಿವೃದ್ಧಿಗೆ ಮುಂದಾಗಲಾಗಿದೆ ಎಂದರು.
ತಾಲ್ಲೂಕಿನಾದ್ಯಂತ ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ ಮತ್ತು ಸಿಬ್ಬಂದಿ, ತಹಸೀಲ್ದಾರ್ ಕೆ.ಚಂದ್ರಮೌಳಿ ಮತ್ತು ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು, ಹುಣಸೆಕುಪ್ಪೆ ಗ್ರಾಮದ ಕೆರೆ ಒತ್ತುವರಿ ಸರ್ವೆ ಕಾರ್ಯದಲ್ಲಿ ಮಾಲಂಗಿ ಗ್ರಾ.ಪಂ ಪಿಡಿಒ ಡಾ.ಆರ್ ಆಶಾ, ಸಿಬ್ಬಂದಿ ಮಂಜುನಾಥ್, ಯೋಗೇಶ್, ವೆಂಕಟೇಶ್, ನಾಗರಾಜ್, ಶಿವಾಜಿ, ಗ್ರಾಮಲೆಕ್ಕಿಗ ಸೋಮಶೇಖರ್, ಸಹಾಯಕ ಕುಮಾರ್, ಸರ್ವೆಯರ್ ಮಹದೇವೇಗೌಡ, ಸಹಾಯಕ ಮಂಜು ಮತ್ತು ಗ್ರಾಮಸ್ಥರು ಇದ್ದರು.