ಚಾಮರಾಜನಗರ : ಸೋಂಕಿಗೆ ತುತ್ತಾಗಿ ಅನುಮಾನಾಸ್ಪದವಾಗಿ 19 ಮೇಕೆಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಂಚಳ್ಳಿ ಗ್ರಾಮದ ಜಡೇಯಾ ಎಂಬವರು 60ಕ್ಕೂ ಹೆಚ್ಚು ಮೇಕೆಯನ್ನು ಸಾಕಾಣಿಕೆ ಮಾಡುತ್ತಿದ್ದು, ಜೀವನೋಪಾಯಕ್ಕಾಗಿ ಇದನ್ನೇ ಅವಲಂಭಿಸಿದ್ದರು. ಆದರೆ ಇವರು ಸಾಕಿದ ಮೇಕೆಗಳಲ್ಲಿ ಕಳೆದ ವಾರದಿಂದ ಕಾಲುಬಾಯಿ ಜ್ವರದ ಸೋಂಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಪರಿಣಾಮ ಶುಕ್ರವಾರ 5 ಹಾಗೂ ಶನಿವಾರ 14 ಮೇಕೆಗಳು ಮೃತಪಟ್ಟಿದ್ದು, ಇದರಿಂದ ಮಾಲೀಕರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಘಟನೆಯ ಬಗ್ಗೆ ಜಡೇಯಾ ಅವರು ಪಶು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ಡಾ.ಮುತ್ತುರಾಜು ಹಾಗೂ ಪಶು ವೈದ್ಯಕೀಯ ಹಿರಿಯ ಪರಿವೀಕ್ಷಕ ಅನಿಲ್ಕುಮಾರ್ ಅವರು ಪರಿಶೀಲನೆ ನಡೆಸಿದರು. ಬಳಿಕ ಸಾವನ್ನಪ್ಪಿರುವ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಮಾಲೀಕ ಜಡೇಯಾ ಅವರು ಮೇಕೆಗಳು ಸಾವನ್ನಪ್ಪಿದ್ದರಿಂದ ಲಕ್ಷಾಂತರ ರೂ ನಷ್ಟ ಉಂಟಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಡಾ. ಮುತ್ತುರಾಜು ಅವರು ಈ ಬಗ್ಗೆ ಅಗತ್ಯ ಕ್ರಮವಹಿಸಿ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಸೋಂಕಿಗೆ ತುತ್ತಾಗಿರುವ ಮೇಕೆಗಳಿಗೂ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.