ಮೈಸೂರು: ಜಗತ್ತಿನಲ್ಲಿ ಬುದ್ಧರನ್ನು ಭವರೋಗದ ವೈದ್ಯ ಎಂದು ಕರೆಯುತ್ತಾರೆ. ಸಮಾಜದಲ್ಲಿ ನಮ್ಮನ್ನು ಕಾಡುತ್ತಿರುವ ಎಲ್ಲ ಮಾನಸಿಕ ರೋಗಗಳಿಗೂ ಬುದ್ಧರ ಧಮ್ಮವೇ ಸಿದ್ಧೌಷಧವಾಗಿದೆ ಎಂದು ಕೊಳ್ಳೇಗಾಲ ತಾಲೂಕಿನ ಚನ್ನಾಲಿಂಗನಹಳ್ಳಿ ಜೇತವನ ಬುದ್ಧ ವಿಹಾರದ ಮನೋರಕ್ಖಿರ ಬಂತೇಜಿ ಹೇಳಿದರು.
ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧಧಮ್ಮ ಸಮಿತಿ ಮತ್ತು ಇತರೆ ಬುದ್ಧಧಮ್ಮ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧಮ್ಮ-ಸ್ವಾತಂತ್ರ್ಯದೆಡೆಗೆ ಭಿಕ್ಕು ಸಂಘದೊಡನೆ ಸಂವಾದ ಕಾರ್ಯಕ್ರಮದಲ್ಲಿ ಬುದ್ಧರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಲೋಭ, ಮೋಹ, ದ್ವೇಷ ಈ ರೋಗಗ್ರಸ್ತ ಮನಸ್ಸುಗಳಿಂದ ಹೊರಬರಬೇಕು. ಜಾತಿಯೆಂಬ ಸಾಮಾಜಿಕ ಅಂಟು ರೋಗಕ್ಕೆ ಬುದ್ಧರ ಬೋಧನೆಗಳೇ ಔಷಧಿಯಾಗಿವೆ. ಸಾಮಾಜಿಕ ಸ್ವಾತಂತ್ರ್ಯವಿದ್ದರೂ ನಾವುಗಳು ಮುಕ್ತವಾಗಿ ಬದುಕಲು ಆಗುತ್ತಿಲ್ಲ. ದೌರ್ಜನ್ಯ, ದಬ್ಬಾಳಿಕೆಗಳು ನಿರಂತರವಾಗಿ ನಡೆಯುತ್ತಿವೆ. ಕ್ರೌರ್ಯದ ಮನಸ್ಸುಗಳನ್ನು ಕಟ್ಟಿ ಹಾಕುವ ಕೆಲಸ ಜರೂರಾಗಿ ಆಗಬೇಕಿದೆ. ಕೆಟ್ಟ ಚಿಂತನೆ, ಆಲೋಚನೆಗಳಿಂದ ಹೊರ ಬರಬೇಕು. ಧ್ಯಾನದ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಶರೀರ ಮತ್ತು ಮನಸ್ಸು ಶುದ್ಧಿಯಾಗಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ಕಟ್ಟಲು ಮತ್ತು ಬಯಸಲು ಸಾಧ್ಯ ಎಂದು ಹೇಳಿದರು.
ತಿ.ನರಸೀಪುರ ನಳಂದ ಬುದ್ಧವಿಹಾರದ ಬೋಧಿರತ್ನ ಬಂತೇಜಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ತನ್ನಲ್ಲಿರುವ ಲೋಭ ದ್ವೇಷ, ಮೋಹ ಇವುಗಳಿಂದ ಬಿಡುಗಡೆಯಾಗಬೇಕು. ದೇಶದ ಒಳಗಿನ ಜನರು ನೆಮ್ಮದಿಯಾಗಿ ಬದುಕಲು ಸ್ವಾತಂತ್ರ್ಯ ಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಇಂದು ದೇಶದಲ್ಲಿ ಸಾವಾಜಿಕ ಮತ್ತು ಧಾರ್ಮಿಕ ತಾರತಮ್ಯ ಮಿತಿ ಮೀರುತ್ತಿದೆ. ಮನುಷ್ಯ ಸ್ವಾರ್ಥ ಬಿಟ್ಟು ನಿಸ್ವಾರ್ಥ ಮನೋಭಾವ ಬೆಳೆಸಿಕೊಂಡಾಗ ಇವುಗಳಿಂದ ಮುಕ್ತಿ ಹೊಂದಲು ಸಾಧ್ಯ ಎಂದರು.
ಕರ್ನಾಟಕ ಬುದ್ಧಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ದೇಶದ ಜನರು ಇನ್ನೂ ದಾಸ್ಯದಲ್ಲೇ ಬದುಕುತ್ತಿದ್ದಾರೆ. ಗಲಭೆ, ದೌರ್ಜನ್ಯಗಳು ನಿಂತಿಲ್ಲ. ೭೬ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಕಾಲಿಡುತ್ತಿದ್ದೇವೆ. ಆದರೆ, ಇಲ್ಲಿನ ಶೋಷಿತರು ಇನ್ನೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೌದ್ಧಧಮ್ಮದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಇವೆ. ಆದ್ದರಿಂದ ನಾನು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದೇನೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಸ್ಮರಿಸಿದರು.
ಲಡಾಖ್ನ ಸೋದೆ ಬಂತೇಜಿ, ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ ಸಮಿತಿಯ ಸಹಕಾರ್ಯದರ್ಶಿ ಎಚ್.ಶಿವರಾಜು, ನಿವೃತ್ತ ಇಂಜಿನಿಯರ್ ಆರ್.ನಟರಾಜು, ನಿಸರ್ಗ ಸಿದ್ದರಾಜು, ನಿವೃತ್ತ ಪ್ರಾಂಶುಪಾಲ ರುದ್ರಯ್ಯ, ಲಕ್ಷ್ಮಣ್ ಹೊಸಕೋಟೆ, ಹೊ.ಬ.ರಘೋತ್ತಮ, ಪುಟ್ಟಮ್ಮಣ್ಣಿ, ಈರೇಶ್ ನಗರ್ಲೆ, ಪಿ.ಸಂಬಯ್ಯ, ಕ್ರಾಂತಿರಾಜ್ ಒಡೆಯರ್, ಎಂ.ನಾಗಯ್ಯ, ಪಿ.ನಿರಂಜನ್, ದೈಹಿಕ ಶಿಕ್ಷಕ ಶೇಖರ್, ನಾರಾಯಣ, ರೂಪೇಶ್, ವಿಜಯ್ ಸೋನಿ, ವಿಶಾಲ್, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಂಶೋಧಕರು ಹಾಜರಿದ್ದರು.