ಭಾರತೀನಗರ: ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಟ್ರ್ಯಾಕ್ಟರ್ ಮತ್ತು ಎತ್ತಿನಗಾಡಿಗಳಿಗೆ ರೇಡಿಯಮ್ ಸ್ಟಿಕ್ಕರ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ಇಲ್ಲಿನ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಹಾಗೂ ಪೊಲೀಸ್ ಇಲಾಖೆ ಅವರ ಸಹಯೋಗದಲ್ಲಿ ರೇಡಿಯಂ ಸ್ಟಿಕ್ಕರ್ ಅಳವಡಿಸುವ ಕಾರ್ಯಕ್ರಮಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಶಿವಮಲವಯ್ಯ ಅವರು ಚಾಲನೆ ನೀಡಿ ಮಾತನಾಡಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್ಗಳು ಯಥೇಚ್ಛವಾಗಿ ಕಬ್ಬು ತುಂಬಿಕೊಂಡು ಭಾರತೀನಗರ ಪಟ್ಟಣಕ್ಕೆ ಬರುವುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿ ಅಪಘಾತಗಳು ಸಹ ಹೆಚ್ಚಾಗುತ್ತಿವೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಲ್ಭಣಗೊಳ್ಳುತ್ತಿವೆ. ಇದನ್ನು ತಡೆಯಲು ರೈತರೇ ಸ್ವಯಂ ಪ್ರೇರಿತವಾಗಿ ಕಬ್ಬನ್ನು ಗಾಡಿಗಳಿಗೆ ಕಡಿಮೆ ತುಂಬಿಕೊಂಡು ಕಾರ್ಖಾನೆಗೆ ಸಾಗಿಸಬೇಕೆಂದು ಸಲಹೆ ನೀಡಿದರು.
ಜೊತೆಗೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಲಾರಿ ಮತ್ತು ಟ್ರ್ಯಾಕ್ಟರ್ ಚಾಲಕರಿಗೆ ಡ್ರೈವಿಂಗ್ ಲೈಸನ್ಸ್ ಮತ್ತು ಇನ್ಸೂರೆನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಅಪಘಾತವಾದ ಸಂದರ್ಭದಲ್ಲಿ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ ಎಂದರು.
ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯ ವರೆಗೆ ಮಾತ್ರ ಕಬ್ಬು ಸರಬರಾಜು ಮಾಡಲು ಕಾರ್ಖಾನೆ ಅವರು ಅನುಮತಿ ನೀಡಬೇಕು. ಆಗ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ರಾತ್ರಿ ವೇಳೆ ಟ್ರ್ಯಾಕ್ಟರ್, ಎತ್ತಿನಗಾಡಿ, ಲಾರಿಗಳಿಂದ ಕಬ್ಬು ಸರಬರಾಜು ಮಾಡುವುದರಿಂದ ಅಪಘಾತಗಳು ಹೆಚ್ಚಾಗುತ್ತವೆ. ಅಪಘಾತಗಳನ್ನು ತಡೆಯಲು ರೇಡಿಯಂ ಸ್ಟಿಕ್ಕರ್ಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಇದೇ ವೇಳೆ ಕಾರ್ಖಾನೆಯ ಕಬ್ಬು ವಿಭಾಗದ ಹಿರಿಯ ವ್ಯವಸ್ಥಾಪಕ ಮಾದೇವುಪ್ರಭು ಮಾತನಾಡಿ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ರೈತರು ಹಗಲು-ರಾತ್ರಿ ಎನ್ನದೆ ಎತ್ತಿನ ಗಾಡಿಗಳ ಮೂಲಕ ಕಬ್ಬುಸಾಗಾಣಿಕೆ ಮಾಡುತ್ತಾರೆ. ರಾತ್ರಿಯ ವೇಳೆ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು ಸಂಚಾರ ಮಾಡುವ ಕಾರಣ ಎತ್ತಿನ ಗಾಡಿಗಳು ಮುಂದೆ ಹೋಗುತ್ತಿರುವುದನ್ನು ಗಮನಿಸದೆ ಅಪಘಾತಗಳು ನಡೆದು ಸಾವು ನೋವುಗಳು ಉಂಟಾಗಿವೆ. ಇದನ್ನು ತಡೆಯುವ ಸಲುವಾಗಿ ರೇಡಿಯಂ ಸ್ಟಿಕ್ಕರ್ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ರಸ್ತೆಗಳಲ್ಲಿ ಆಗುವ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.