ಮೈಸೂರು: ಯಾವುದೋ ತಾಲೂಕು ಕೋರ್ಟ್ನಲ್ಲಿ ಅಭ್ಯಾಸ ಮಾಡುತ್ತಿದ್ದ ಸಿದ್ದರಾಮಯ್ಯ ಅವರಿಗೆ ದೇಶದ ಆರ್ಥಿಕತೆ ಹೇಗೆ ಅರ್ಥವಾಗುತ್ತದೆ? ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವುದು ಹೇಗೆ ಎಂಬುದು ಬಿಎ, ಎಲ್ಎಲ್ಬಿ ಓದಿದವರಿಗೆ ಅರ್ಥವಾಗುವಂತಿದ್ದರೆ ಈ ರೀತಿ ಅಸಂಬದ್ಧವಾಗಿ ಮಾತನಾಡುತ್ತಿರಲಿಲ್ಲ? ಎಂದು ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಹಾಗೂ ತೆರಿಗೆ ಬಾಕಿ ನೀಡಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಹದಿಮೂರು ಬಾರಿ ಬಜೆಟ್ ಮಂಡಿಸಿರುವುದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರಿಗೆ ತೆರಿಗೆ ವ್ಯವಸ್ಥೆಯ ಕುರಿತು ಕನಿಷ್ಠ ಜ್ಞಾನ ಇಲ್ಲದೆ ಹೀಗೆ ಮಾತನಾಡುತ್ತಿದ್ದಾರೆ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಜಗದೀಶ್ ಶೆಟ್ಟರ್ವರೆಗೆ ಎಲ್ಲಾ ಮುಖ್ಯಮಂತ್ರಿಗಳು ಸಾಲ ಮಾಡಿದ್ದ ಎರಡು ಪಟ್ಟನ್ನು ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ 29 ರೂ. ಕಡಿತಗೊಳಿಸಿ 3 ರೂಪಾಯಿಗೆ ಅಕ್ಕಿ ನೀಡಿದರೆ, ಅದರಲ್ಲಿ 2 ರೂಪಾಯಿ ಕಡಿತಗೊಳಿಸಿ 1 ರೂಪಾಯಿಗೆ ಅಕ್ಕಿಕೊಟ್ಟೆ ಎಂದು ಬೋರ್ಡು ಹಾಕಿಕೊಂಡಿದ್ದ ಸಿದ್ದರಾಮಯ್ಯನವರೇ ಉಳಿಕೆ 29 ರೂಪಾಯಿ ಕೊಟ್ಟಿದ್ದು ಯಾರು? ಕೇಂದ್ರ ಸರ್ಕಾರ, ಅದು ಜನರ ತೆರಿಗೆ ಹಣ ಅಲ್ಲವೇ? ಮೈಸೂರಿನಿಂದ ಆಯ್ಕೆಯಾದ ನೀವು ನೀಡುತ್ತಿರುವ ಹೇಳಿಕೆಯನ್ನು ನೋಡಿದರೆ ನಾಚಿಕೆ ಆಗುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗೆ ಲೆಕ್ಕಾಚಾರದ ಕನಿಷ್ಠ ಜ್ಞಾನ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಅವರು ಮೋದಿಗೆ ಪಾಠ ಮಾಡುವುದು ಬೇಕಿಲ್ಲ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಸದಾನಂದಗೌಡ, ಜಗದೀಶ್ ಶೆಟ್ಟರ್ವರೆಗೆ ಇದ್ದ ರಾಜ್ಯದ ಸಾಲವನ್ನು ಒಮ್ಮೆಲೆ ದ್ವಿಗುಣ ಮಾಡಿದವರು ಸಿದ್ದರಾಮಯ್ಯ. ಅವರ ಲೆಕ್ಕಾಚಾರದ ಜ್ಞಾನವನ್ನು ನಾವು ತಿಳಿಯಬೇಕಿಲ್ಲ. ನಾನು ಅನ್ನಭಾಗ್ಯ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ಹೊಸದಾಗಿ ಕಟ್ಟುವ ವಿಚಾರ ಬಂದಾಗ ಮಹಾರಾಜರೇನು ಸ್ವಂತ ದುಡ್ಡಿನಲ್ಲಿ ಕಟ್ಟಿಸಿದ್ದರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಸಿದ್ದರಾಮಯ್ಯ ಅವರು 1ಕ್ಕೆ ಕೆ.ಜಿ. ಅಕ್ಕಿ ನೀಡಿದ್ದು ತಮ್ಮ ಸ್ವಂತ ದುಡ್ಡಿನಿಂದಲೇ? ದಲಿತರ ಸಾಲವನ್ನು ಮನ್ನಾ ಮಾಡಿದೆ ಎನ್ನುತ್ತಾರೆ. ಅವರೇನು ಹೊಲದಲ್ಲಿ ದುಡಿದು ತಂದು ಸಾಲ ತೀರಿಸಿದರೇ? ಇದೂ ಜನರ ತೆರಿಗೆ ಹಣ ತಾನೇ? ಮೈಸೂರಿನ ವ್ಯಕ್ತಿ ವಿಚಾರಹೀನವಾಗಿ ಮಾತನಾಡುತ್ತಾರೆ ಎಂದರೆ ನಾಚಿಕೆ ಆಗುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.