ಮೈಸೂರು: ಮಾದಕ ವ್ಯಸನಿಯೊಬ್ಬ ಎಟಿಎಂ ಸೆಕ್ಯೂರಿಟಿ ಗಾರ್ಡ್ ಅನ್ನು ಬರ್ಬರವಾಗಿ ಕೊಲೆ ಗೈದು ಪರಾರಿಯಾಗಿದ್ದು, ಎಟಿಎಂ ಸಿಸಿಟಿವಿ ದೃಶ್ಯವಾಳಿಯ ಆಧಾರದ ಮೇಲೆ ಆರೋಪಿಯನ್ನು ಘಟನೆ ನಡೆದ ಒಂದೇ ಗಂಟೆಯಲ್ಲಿ ಬಂಧಿಸಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವಾಗಲೇ ನಗರದ ಮೇಟಗಳ್ಳಿಯ ಮುಖ್ಯರಸ್ತೆಯ ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ನಲ್ಲಿ ಇಂತಹ ಘಟನೆ ನಡೆದಿದ್ದು, ಎಟಿಎಂ ಸೆಕ್ಯೂರಿಟಿಯಾಗಿದ್ದ ಸದಾನಂದ(60) ಕೊಲೆಯಾದವರು. ಮಧ್ಯವ್ಯಸನಿಯಾಗಿದ್ದ ಅಭಿಷೇಕ್(27) ಎಂಬಾತ ಕೊಲೈಗೈದು ಬಂಧಿಯಾಗಿರುವ ಆರೋಪಿಯಾಗಿದ್ದಾನೆ.
ಮಧ್ಯವಸನಿಯಾಗಿದ್ದ ಅಭಿಷೇಕ ಮಧ್ಯರಾತ್ರಿ 12 ಗಂಟೆಗೆ ಬಂದು ಒಂದು ಬೀಡಿ ಕೇಳಿದ್ದಾನೆ. ನಂತರ ತಡರಾತ್ರಿ 2 ಗಂಟೆಗೆ ಬಂದು ಕುಡಿಯಲು ಹಣ ಕೇಳಿದ್ದಾನೆ. ನಂತರ 3.10 ನಿಮಿಷಕ್ಕೆ ಬಂದೂ ದುಡ್ಡುಕೊಂಡು ಎಂದು ಸೆಕ್ಯೂರಿಟಿಯನ್ನು ಪೀಡಿಸಿದ್ದಾನೆ. ಸೆಕ್ಯೂರಿಟಿ ಇಲ್ಲವೆಂದು ಹೇಳಿದಾಗ ಎಟಿಎಂನಲ್ಲಿ ಇರುವ ಹಣವನ್ನು ತೆಗೆದುಕೊಡುವಂತೆ ಕೇಳಿದ್ದಾನೆ. ಇದಕ್ಕೆ ನನ್ನ ಬಳಿ ಎಟಿಎಂ ನ ಬೀಗವಿಲ್ಲವೆಂದು ಸೆಕ್ಯೂರಿಟಿ ಹೇಳಿದ್ದಕ್ಕೆ ತಾನೇ ಎಟಿಎಂ ದರೋಡೆ ಮಾಡಲು ಮುಂದಾಗಿದ್ದಾನೆ. ಅಷ್ಟರಲ್ಲಿ ಸೆಕ್ಯೂರಿಟಿ ಅಭಿಷೇಕ್ ಗೆ ಕಪಾಳಮೋಕ್ಷ ಮಾಡಿದ್ದು, ಇದರಿಂದ ಕುಪಿತಗೊಂಡ ಮಾದಕ ವ್ಯಸನಿ ಅಭಿಷೇಕ್ ಸೆಕ್ಯೂರಿಟಿಯ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಹೊಡೆದಿದ್ದಾನೆ. ಸೆಕ್ಯೂರಿಟಿ ಸ್ಥಳದಲ್ಲೇ ಮೃತಪಡುತ್ತಿದ್ದಂತೆ ದರೋಡೆಯನ್ನು ನಿಲ್ಲಿಸಿ ಸ್ಥಳದಿಂದಲೇ ಕಾಲ್ಕಿತ್ತಿದ್ದಾನೆ.
ಎಟಿಎಂ ಸೆಕ್ಯೂರಿಟಿ ಕೊಲೆಯಾಗಿರುವ ವಿಷಯ ತಿಳಿದು ಸ್ಥಳಕ್ಕೆ ಹೋದ ಮೇಟಗಳ್ಳಿ ಠಾಣೆಯ ಪೊಲೀಸರು ಎಟಿಎಂ ಸಿಸಿಟಿವಿ ಪರಿಶೀಲಿಸಿದಾಗ ಕೊಲೆ ಮಾಡಿರುವುದು ಅಭಿಷೇಕ್ ಎಂದು ತಿಳಿಯುತ್ತಿದ್ದಂತೆ ಕೂಡಲೇ ಆತನ ಬೆನ್ನು ಹತ್ತಿ ಒಂದೇ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.