ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಸುಕಿನ ಜಾವ 2ಗಂಟೆಗೆ ನಿಧನರಾದ ಹೆಚ್.ಡಿ ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡೆದು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವಾನ ಹೇಳಿದರು.
ಇಂದು ಸಿಎಂ ಸಿದ್ದರಾಮಯ್ಯ ರಾಜೋತ್ಸವ ಕಾರ್ಯಕ್ರಮವನ್ನ ಮುಗಿಸಿ ಇಂದು ಮುಂಜಾನೆ ನಿಧನರಾದ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ಅಂತಿಮ ದರ್ಶನ ಪಡೆದು ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚಿಕ್ಕಮಾದು ಅವರ ಜೊತೆಗಿನ ಒಡನಾಟ ಸ್ಮರಿಸಿದರು. ಚಿಕ್ಕಮಾದು ಅವರ ನಿಧನ ತಮಗೆ ಭಾರಿ ದುಃಖ ಉಂಟು ಮಾಡಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅವರು ಜನಪರ ಕಾಳಜಿ ಹೊಂದಿದ್ದರು. ಸಜ್ಜನ ರಾಜಕಾರಣಿ ಎಂದು ಮುಖ್ಯಮಂತ್ರಿಯವರು ಬಣ್ಣಿಸಿದರು.
ಚಿಕ್ಕಮಾದು ಅವರು ಇನ್ನೂ ಬಹಳ ಕಾಲ ರಾಜಕೀಯದಲ್ಲಿ ಇರಬೇಕಿತ್ತು. ಕಳೆದ ವಾರ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ, ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ ಎಂದರು. ನಾನು ಮತ್ತು ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ವಿಶ್ವಾಸ ಮತ್ತು ಸ್ನೇಹ ಚೆನ್ನಾಗಿತ್ತು. ಅವರು ಬೇರೆ ಪಕ್ಷದವರು ಎಂದು ಯಾವತ್ತೂ ಪರಿಗಣಿಸಿರಲಿಲ್ಲ ಎಂದರು. ಚಿಕ್ಕಮಾದು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.