ಮೈಸೂರು: ಹೊಸ ವರ್ಷದ ಮೊದಲ ತಿಂಗಳಲ್ಲೇ ಮೈಸೂರಿಗರಿಗೆ ದೊಡ್ಡದೊಂದು ಬಂಪರ್ ಸಿಕ್ಕಿದೆ. ಇಷ್ಟು ವರ್ಷ ಪಾಸ್ಪೋರ್ಟ್ ಗಾಗಿ ಬೆಂಗಳೂರಿಗೆ ಅಲೆಯಬೇಕಿದ್ದ ಮೈಸೂರಿಗರು ಮತ್ತು ಚಾಮರಾಜನಗರದವರು ಇನ್ಮುಂದೆ ಮೈಸೂರಲ್ಲೇ ಪಾಸ್ಪೋರ್ಟ್ ಪಡೆಯಬಹುದು. ಏಕೆಂದರೆ, ಮೈಸೂರಿಗರ ಆಸೆ ಮತ್ತು ಬೇಡಿಕೆಯಂತೆ ನಗರದಲ್ಲೇ ಪಾಸ್ಪೋರ್ಟ್ ಸೇವಾ ಸೆಂಟರ್ ಶುರುವಾಗುತ್ತಿದೆ.
ಜನವರಿ 25 ರಂದು ಮೈಸೂರಿನ ಮೇಟಗಳ್ಳಿಯಲ್ಲಿನ ಅಂಚೆ ಕೇಂದ್ರದ ಕಟ್ಟಡದಲ್ಲಿ ಈ ಸೆಂಟರ್ ಆರಂಭವಾಗುತ್ತಿದೆ. ಈ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರಲ್ಲಿ ಅಂತೂ ಇಂತೂ ಪಾಸ್ಪೋರ್ಟ್ ಸೇವಾ ಸೆಂಟರ್ ಶುರುವಾದಂತೆ ಆಗುತ್ತೆ.
ಪಾಸ್ಪೋರ್ಟ್ ಗಾಗಿ ಅನ್ ಲೈನ್ ನ್ನಲ್ಲಿ ಅರ್ಜಿ ಹಾಕುತ್ತಿದ್ದ ಮೈಸೂರು ಮತ್ತು ಚಾಮರಾಜನಗರದ ಜನರು ಅದಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ಒಂದೇ ದಿನಕ್ಕೆ ಅರ್ಜಿ ಪರಿಶೀಲನೆ ಮುಗಿದರೆ ಸರಿ, ಇಲ್ಲದಿದ್ದರೆ ಎರಡು ದಿನ ಅದಕ್ಕಾಗಿಯೇ ಅಲ್ಲಿರಬೇಕಿತ್ತು. ಅಲ್ಲದೆ, ಒಂದು ದಾಖಲೆ ತಪ್ಪಿದ್ದರೂ ಪಾಸ್ಪೋರ್ಟ್ ಅಧಿಕಾರಿಗಳು ಅರ್ಜಿಯನ್ನು ಮುಂದಕ್ಕೆ ಹಾಕುತ್ತಿದ್ದರು. ಆಗಂತೂ, ಈ ಓಡಾಟವೂ ಬೇಡ ಪಾಸ್ಪೋರ್ಟ್ ಸಹವಾಸವೂ ಬೇಡ ಅನ್ನೋ ಮನಸ್ಥಿತಿಗೆ ಜನರು ಬಂದಿದ್ದರು. ಹೀಗಾಗಿಯೇ ಮೈಸೂರಲ್ಲಿ ಪಾಸ್ಪೋರ್ಟ್ ಕೇಂದ್ರ ಶುರು ಮಾಡಬೇಕು ಎಂಬ ಬೇಡಿಕೆ ಶುರುವಾಗಿತ್ತು.
ಇದಕ್ಕಿಂತ ಮುಖ್ಯವಾಗಿ, ಮೈಸೂರು ಹೇಳಿ ಕೇಳಿ ರಾಜ್ಯದ ಎರಡನೇ ರಾಜಧಾನಿಯಂತೆ ಇದೆ. ಬೆಂಗಳೂರಿನಷ್ಟೇ ಮೈಸೂರಿಗೂ ತನ್ನದೆ ಆದ ಮಹತ್ವ ಇದೆ. ಎಲ್ಲಾ ದೃಷ್ಟಿಯಿಂದಲ್ಲೂ ಇಲ್ಲಿ ಮೈಸೂರು ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭಕ್ಕೆ ಸರಿಯಾದ ಸ್ಥಳ. ಇದರಿಂದಲೇ ಆಗಾಗ, ಕೆಲ ಹೋರಾಟಗಾರರು ಇದರ ಬಗ್ಗೆ ಧ್ವನಿ ಎತ್ತುತ್ತಿದ್ದರು.
ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಪಾಸ್ಪೋರ್ಟ್ ಕೇಂದ್ರದ ವಿಚಾರದ ಧ್ವನಿಗೆ ಧ್ವನಿಗೂಡಿಸಿ, ತಾವು ಆಯ್ಕೆಯಾದರೆ ಮೈಸೂರಿಗರ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿದರು. ಅದೇ ರೀತಿ ಅವರು ಚುನಾವಣೆಯಲ್ಲಿ ಗೆದ್ದರು. ಗೆದ್ದ ಮೇಲೆ ಮೈಸೂರಲ್ಲಿ ಒಂದು ದಿನದ ಪಾಸ್ಪೋರ್ಟ್ ಸೇವೆಯ ಶಿಬಿರ ಮಾಡಿದ್ದರು. ಇಂತಹ ಮೂರು ನಾಲ್ಕು ಶಿಬಿರಗಳು ಮೈಸೂರಲ್ಲಿ ಜರುಗಿದ್ದವು. ಆದರೆ, ಇದರಿಂದ ಮೈಸೂರಿಗರಿಗೆ ಹೆಚ್ಚು ಪ್ರಯೋಜನ ಆಗಿರಲಿಲ್ಲ. ಈ ಕಾರಣಕ್ಕಾಗಿ, ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದ ಸಂಸದರು, ಅಂತೂ ಇಂತೂ ಪೈಲೆಟ್ ಮಾದರಿಯ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಮೈಸೂರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇತಿಹಾಸದ ಪುಟ ಸೇರುತ್ತಿರುವ ಅಂಚೆ ಇಲಾಖೆಯನ್ನು ಪಾಸ್ಪೋರ್ಟ್ ಸೇವಾ ಕೇಂದ್ರದ ವ್ಯಾಪ್ತಿಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಮೈಸೂರು ಮತ್ತು ಗುಜರಾತ್ ನಲ್ಲಿ ಪೈಲೆಟ್ ಯೋಜನೆ ಶುರು ಮಾಡುತ್ತಿದೆ. ಈ ಪೈಲೆಟ್ ಯೋಜನೆ ಯಶಸ್ವಿಯಾದರೆ ಭವಿಷ್ಯದಲ್ಲಿ ಎಲ್ಲಾ ಕೇಂದ್ರ ಅಂಚೆ ಕಚೇರಿಗಳಲ್ಲೂ ಪಾಸ್ ಪೋರ್ಟ್ ಸೇವಾ ಸೆಂಟರ್ ಗಳು ಆರಂಭವಾಗುತ್ತವೆ. ಆಗ, ದೇಶದ ಜನರು ತುಂಬಾ ಸುಲಭವಾಗಿ ಪಾಸ್ಪೋರ್ಟ್ ಪಡೆಯಬಹುದು.
ವಿಮಾನ ನಿಲ್ದಾಣದಂತೆ ಆಗದರಲಿ ಮೈಸೂರಿಗರ ಕನಸಿನಂತೆ ಈ ಹಿಂದೆ ಮೈಸೂರಿನ ಹೊರವಲಯದ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲಾಯಿತು. ಆದರೆ, ಸೂಕ್ತ ಸೇವೆ, ಪ್ರಚಾರ, ಪ್ಲಾನಿಂಗ್ ನ ಕೊರತೆಯಿಂದ ಈ ನಿಲ್ದಾಣ ಹೆಸರಿಗೆ ಮಾತ್ರ ಇದ್ದಂತಾಗಿದೆ. ವಿಐಪಿಗಳು ಬಂದು ಹೋಗುವುದಕ್ಕಾಗಿ ಒಂದು ವಿಮಾನ ನಿಲ್ದಾಣ ಮಾಡಿದಂತೆ ಆಗಿದೆಯೇ ಹೊರತು ಅದರಿಂದ ಮೈಸೂರಿಗರಿಗೆ ಇರಲಿ, ಪ್ರವಾಸಿಗರಿಗೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮಲ್ಲೂ ವಿಮಾನ ನಿಲ್ದಾಣವಿದೆ ಅಂತಾ ಮೈಸೂರಿಗರು ಹೇಳಿಕೊಳ್ಳುವುದಕ್ಕಷ್ಟೇ ಇದು ಸೂಕ್ತವಾಗಿದೆ.
ಇಂತಹ ಸ್ಥಿತಿ ಮತ್ತು ವ್ಯವಸ್ಥೆ ಪಾಸ್ ಪೋರ್ಟ್ ಸೇವಾ ಸೆಂಟರ್ ಗೆ ಬಾರದಂತೆ ನೋಡಿಕೊಳ್ಳಬೇಕಿದೆ. ಬೆಂಗಳೂರಿನ ಮಾದರಿಯಲ್ಲೇ ವ್ಯವಸ್ಥಿತವಾಗಿ ಪಾಸ್ಪೋರ್ಟ್ ಸಿಗುವಂತೆ ಆಗಬೇಕಿದೆ. ಹತ್ತು ಹನ್ನೆರಡು ದಿನದಲ್ಲಿ ಹೇಗೆ ಜನರಿಗೆ ಪಾಸ್ಪೋರ್ಟ್ ಕೈಗೆ ಸಿಗುತ್ತಿದೆಯೋ ಅದೇ ರೀತಿ ಇಲ್ಲೂ ಸಿಕ್ಕರೆ ನಿಜಕ್ಕೂ ಜನ ಬೆಂಗಳೂರಿಗೆ ಪಾಸ್ಪೋರ್ಟ್ ಗಾಗಿ ಹೋಗುವುದು ತಪ್ಪುತ್ತೆ. ಇಲ್ಲದೆ ಇದ್ದರೆ, ನಮ್ಮ ಊರಲ್ಲೂ ಪಾಸ್ಪೋರ್ಟ್ ಸೇವಾ ಕೇಂದ್ರವಿದೆ ಎಂದು ಹೇಳಿಕೊಳ್ಳುವುದಕ್ಕಷ್ಟೇ ಸಿಮೀತವಾಗುತ್ತೆ.