ರಾಮನಗರ: ಹಳ್ಳದಲ್ಲಿ ಮಳೆ ನೀರು ಹರಿಯುವುದನ್ನು ಕಾಣಲು ಹೋಗಿದ್ದ ವೇಳೆ ಮಣ್ಣಿನ ದಿಬ್ಬ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ತಿಮ್ಮಸಂದ್ರ ಗ್ರಾಮದ ಬಳಿ ನಡೆದಿದೆ.
ಭಾನುವಾರ ಬೆಳಿಗ್ಗೆ 9 ಗಂಟೆ ವೇಳೆ ಮೊಬೈಲ್ ನಲ್ಲಿ ಹಳ್ಳದ ಚಿತ್ರ ತೆಗೆಯುತ್ತಿದ್ದ ಅರಳೀಮರದ ದೊಡ್ಡಿ ಗ್ರಾಮದ ನಿವಾಸಿ ನಂದೀಶ್(40) ಮೃತಪಟ್ಟಿದ್ದಾರೆ. ಶವ ಹೊರತೆಗೆಯುವ ಕಾರ್ಯಾಚರಣೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿದ್ಯುತ್ ತಗುಲಿ ಮೃತ್ಯು
ಬಸವಕಲ್ಯಾಣದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ನಿಂತಿದ್ದ ಮಳೆನೀರನ್ನು ತೆಗೆಯುತ್ತಿದ್ದ ಯುವಕನೊಬ್ಬ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ. ಶನಿವಾರ ಈ ಘಟನೆ ನಡೆದಿದ್ದು, ಕೌಡಿಯಾಳದ ಅವಿನಾಶ್ ಹಿರೊಳ್ಳೆ(23) ಮೃತಪಟ್ಟ ಯುವಕ. ಈ ಬಗ್ಗೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಬಿಡದಿಯಲ್ಲಿ ಶನಿವಾರ ಸಂಜೆ ಇಬ್ಬರು ಮೀನು ಹಿಡಿಯಲು ಹೋದವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಉಮೇಶ್(32) ಮತ್ತು ಎಂದು ರವಿ(19) ಎಂದು ಗುರುತಿಸಲಾಗಿದೆ. ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.