ಮೈಸೂರು: ಮೈಸೂರು ನಗರ ಬೆಲವತ್ತ ಗ್ರಾಮದ ಸರ್ವೆ ನಂಬರ್ 295ರಲ್ಲಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಭಿಮುಖವಾಗಿ ಭೂ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಯಿತು.
ಇಂದು ಬೆಳ್ಳಂಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದ್ದು ಈ ಭೂಪ್ರದೇಶವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಗಳನ್ನು ಕೈಗೊಳ್ಳುವ ಮುನ್ನ ಪ್ರಾಧಿಕಾರದಿಂದ ಕರ್ನಾಟಕ ನಗರ ಯೋಜನಾ ಕಾಯ್ದೆ 1961 ಕಲಂ(14) (15) ಹಾಗೂ (17)ರಂತೆ ಕಟ್ಟಡ ನಿರ್ಮಾಣ ಮತ್ತು ವಾಣಿಜ್ಯ ಸಂಕೀರ್ಣ ಗಳನ್ನು ನಿರ್ಮಾಣ ಮಾಡಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಕಲಂ (112/ಸಿ) (1) (11)ರಲ್ಲಿ ಕರ್ನಾಟಕ ನಗರ ಯೋಜನಾ ಕಾಯ್ದೆ 1961ರಡಿಯಲ್ಲಿ ಕೃಷಿ ಭೂಮಿಯಲ್ಲಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ(ಶೋಭಾ ಗಾರ್ಡನ್ ಬಡಾವಣೆಯ ಉತ್ತರ ದಿಕ್ಕಿನಲ್ಲಿ) ಮುಖ್ಯ ರಸ್ತೆಗೆ ಅ ಭಿಮುಖವಾಗಿ ಅನುಮೋದನೆ ಪಡೆಯದೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವುದು ಕಾನೂನು ಬಾಹಿರವಾಗಿದೆ.ಇಲ್ಲಿ ಐದು ಮಳಿಗೆಗಳನ್ನು ಮೈಸೂರು ನಗರಪಾಲಿಕೆ ವಾರ್ಡ್ ೯ ರ ಸದಸ್ಯ ಸಮೀವುಲ್ಲ ನಿರ್ಮಿಸುತ್ತಿದ್ದರು ಎನ್ನಲಾಗಿದೆ.
ಈ ಸರ್ವೆ ನಂಬರ್ ಭೂಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಎರಡು ಬಾರಿ ನೋಟೀಸ್ ನೀಡಿದ್ದರೂ ಸಹ ನಿರ್ಮಾಣ ಕಾಮಗಾರಿಯನ್ನು ದುಂಡಾವರ್ತನೆಯ ಮೇಲೆ ಮುಂದುವರಿಸಿದ್ದರು. ಅನಧಿಕೃತವಾಗಿ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಇಂದು ಬೆಳಿಗ್ಗೆ 6ಗಂಟೆಗೆ ಪೊಲೀಸ್ ಬಂದೋಬಸ್ತ್ ನಲ್ಲಿ ತೆರವುಗೊಳಿಸಲಾಗಿದೆ ಎಂದು ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದ್ದಾರೆ.