ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಅರಮನೆ ಆಡಳಿತ ಮಂಡಳಿಯಲ್ಲಿ ಸುದ್ದಿಗೋಷ್ಠಿಯನ್ನು ಗುರುವಾರ ನಡೆಸಿ ಮಾಹಿತಿಯನ್ನು ನೀಡಿದರು.
ಜಗದ್ವಿಖ್ಯಾತ ವಿಜಯದಶಮಿಯ ಮೆರವಣಿಗೆಗೆ ಪ್ರವಾಸಿಗರು ಹಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ, ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರಿಗೆ ಹಾಗೂ ಗಣ್ಯರಿಗೆ ಅರಮನೆ ಪ್ರವೇಶ ಮತ್ತು ಪಾಕರ್ಿಂಗ್ ವ್ಯವಸ್ಥೆಯ ಮಾಹಿತಿ ನೀಡಿದರು.
ಗೋಲ್ಡ್ ಕಾರ್ಡ್ ಮತ್ತು ಅಧಿಕೃತ ಟಿಕೆಟ್ ಹೊಂದಿರುವ ವ್ಯಕ್ತಿಗಳಿಗೆ 10 ಪ್ರವೇಶ ದ್ವಾರಗಳ ಮೂಲಕ 15 ಆವರಣಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು. ಈ ಬಾರಿ ವಿಶೇಷವಾಗಿ ಬುಕ್ಮೈಶೊ ಅವರು ಟಿಕೆಟ್ ವ್ಯವಸ್ಥೆಯನ್ನು ಮಾಡಿದ್ದು, ಟಿಕೆಟ್ ಇಲ್ಲದ ಜನರಿಗೆ ಒಳ ಪ್ರವೇಶ ಇರುವುದಿಲ್ಲ.
ವಿತರಿಸಲಾಗಿರುವ ಟಿಕೆಟ್ಗಳಲ್ಲಿ ಪ್ರವೇಶ ದ್ವಾರದ ಮಾಹಿತಿ, ಪಾರ್ಕಿಂಗ್ ವಿವರ, ಕಾಯ್ದಿರಿಸಿದ ಆಸನಗಳ ಆವರಣ, ಸ್ಥಳ ನಕ್ಷೆ ಎಲ್ಲವು ಇರಲಿದೆ. ಬಾರ್ಕೋಡೆಡ್ ಹಾಗೂ ಇನ್ಫ್ಯೂಸ್ಡ್ ಪೇಪರ್ ಎಂಬ ಎರಡು ಬಗೆಯ ಪರಿಶೀಲನೆ ನಂತರ ಮಾತ್ರವೇ ಒಳಪ್ರವೇಶ ನೀಡಲಾಗುತ್ತದೆ. ಒಟ್ಟು 25,400 ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಇದೇ ಮಾದರಿಯಲ್ಲಿ ಪಂಜಿನಕವಾಯತು ನಡೆಯುವ ಬನ್ನಿಮಂಟಪ ಮೈದಾನದಲ್ಲಿಯೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಉಪ ಪೊಲೀಸ್ ಆಯುಕ್ತರಾದ ವಿಷ್ಣುವರ್ಧನ ಅವರು ಮಾತನಾಡಿ ಅರಮನೆಯ ಆವರಣದಲ್ಲಿ ವಿಶೇಷ ಆವರಣಗಳಿಗೆ ನೇರ ಪ್ರವೇಶ ಕಲ್ಪಿಸಲಾಗಿದೆ. ಎಲ್ಲ ರೀತಿಯ ಅನುಕೂಲಗಳನ್ನು ಮಾಡಲಾಗಿದ್ದು, ಜನತೆ ಆವರಣಗಳನ್ನು ಬದಲಿಸದಂತೆ ಬ್ಯಾರಿಕೇಡ್ ಸಿದ್ದಗೊಳಿಸಲಾಗಿದೆ. ಜನತೆ ಯಾವುದೇ ಹಾನಿಕಾರಕ ಪದಾರ್ಥಗಳನ್ನು ತರಬಾರದು, ಪ್ಯಾಕೆಟ್ ಆಹಾರ ಪದಾರ್ಥಗಳಿಗೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಮತ್ತೊರ್ವ ಉಪ ಪೊಲೀಸ್ ಆಯುಕ್ತ ವಿಕ್ರಮ ವಿ ಅಮಟೆ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ದನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಉಪಸ್ಥಿತರಿದ್ದರು.