ಮೈಸೂರು: ಮೈಸೂರು ನಗರದಲ್ಲಿ ಬುಧವಾರ ಸುರಿದ ಭಾರೀ ಮಳೆ ಅವಾಂತರವನ್ನು ಸೃಷ್ಟಿಸಿದ್ದು, ಚಾಮುಂಡಿಬೆಟ್ಟದಲ್ಲಿ ನಂದಿಗೆ ತೆರಳುವ ಮಾರ್ಗದಲ್ಲಿ ಭೂಕುಸಿತವುಂಟಾಗಿದ್ದು, ಈ ಸಂಬಂಧ ಚಾಮುಂಡಿಬೆಟ್ಟಕ್ಕೆ ತೆರಳುವ ರಸ್ತೆಯಿಂದ ನಂದಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ.
ಈ ಹಿಂದೆ ಬಹಳಷ್ಟು ಸಮಯಗಳ ಕಾಲ ನಂದಿಗೆ ತೆರಳುವ ರಸ್ತೆಯನ್ನು ಬಂದ್ ಮಾಡಿ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು. ಹಾಳಾಗಿದ್ದ ರಸ್ತೆಯನ್ನು ಡಾಂಬರೀಕರಣ ಮಾಡಿದ್ದು ಜನರಲ್ಲಿ ಖುಷಿಯನ್ನು ತಂದಿತ್ತು. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಸಂದರ್ಭ ಆದ ಎಡವಟ್ಟು ಭೂ ಕುಸಿತಕ್ಕೆ ಕಾರಣವಾಯಿತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ವ್ಯಾಪ್ತಿಯಲ್ಲಿ ರಸ್ತೆ ಕುಸಿತವಾಗುವುದು ಹೊಸತೇನಲ್ಲ. ಈ ಹಿಂದೆಯೂ ಅಲ್ಪ ಪ್ರಮಾಣದಲ್ಲಿ ಕುಸಿತವಾಗಿರುವ ನಿದರ್ಶನವಿದೆ.
ಇದೀಗ ಭೂಕುಸಿತವಾಗಿರುವ ಜಾಗವು ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ( ದಸರಾ ವೇಳೆ ಸುಸ್ವಾಗತ ವಿದ್ಯುತ್ ಬೋರ್ಡ್ ಹಾಕಿರುವ ಸಮೀಪ) ಭೂಕುಸಿತ ಉಂಟಾಗಿದ್ದು, ಈ ಮಾರ್ಗದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಆದರೆ ಈಗ ಇಲ್ಲಿಗೆ ಸಂಚಾರ ಬಂದ್ ಮಾಡಲಾಗಿದೆ. ಜತೆಗೆ ಕುಸಿದಿರುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಹಾಗೆನೋಡಿದರೆ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆ ಇಡೀ ಮೈಸೂರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಎಲ್ಲೆಂದರಲ್ಲಿ ನೀರು ಉಕ್ಕಿ ಹರಿದ ಪರಿಣಾಮ ರಸ್ತೆಗಳೆಲ್ಲವೂ ಹಾಳಾಗಿದೆ. ತಗ್ಗು ಪ್ರದೇಶದಲ್ಲಿ ನೀರು ಮನೆಗೆ ನುಗ್ಗಿದೆ. ನಗರದ ಜೋಡಿ ರಸ್ತೆ ಬಳಿರುವ ವಿಜಯ ಬ್ಯಾಂಕ್ ಸರ್ಕಲ್ ವಿಶ್ವ ಮಾನವ ರಸ್ತೆ ಬಳಿಯ ಪೆಟ್ರೋಲ್ ಬಂಕ್ ಕಟ್ಟಡ ಕುಸಿತವಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಒಟ್ಟಾರೆ ಕೆಲವು ದಿನಗಳಿಂದ ನಗರದಲ್ಲಿ ದಿಢೀರ್ ಆಗಿ ಸುರಿಯುತ್ತಿರುವ ಭಾರೀ ಜನರಲ್ಲಿ ಭಯವನ್ನುಂಟು ಮಾಡಿದೆ. ಇನ್ನೊಂದೆಡೆ ರೈತರು ಬೆಳೆಕೊಯ್ಲಿಗೆ ಬಂದಿರುವ ಸಮಯದಲ್ಲಿ ಮಳೆ ಬರುತ್ತಿರುವುದರಿಂದ ಆತಂಕಕ್ಕೀಡಾಗಿದ್ದಾರೆ.