ಮೈಸೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವೆಡೆ ಕೃಷಿ ಬೆಳೆಗಳು ನಾಶವಾಗಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.
ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಎಡಬಿಡದೆ ಮೂರು ದಿನಗಳಿಂದ ಸುರಿಯುತ್ತಿರುವ ಮುಸಲಧಾರೆಗೆ ಜನ ತತ್ತರಿಸುವಂತಾಗಿದೆ. ಮಳೆಯಿಂದ ಕೃಷಿಕರು ಬೆಳೆ ಕಳೆದುಕೊಂಡು ಪರದಾಡಿದರೆ, ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಸಾಧÀ್ಯವಾಗದೆ ಪರಿತಪಿಸುವಂತಾಗಿದೆ. ವಿದ್ಯಾರ್ಥಿಗಳು ಕೂಡ ಶಾಲಾ ಕಾಲೇಜಿಗೆ ತೆರಳಲು ಹರಸಾಹಸಪಡುವಂತಾಗಿದೆ.
ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ರಸ್ತೆಗಳು ಗುಂಡಿ ಬಿದ್ದು, ನೀರು ತುಂಬಿದ್ದು ಈ ದಾರಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರು, ವಾಹನ ಸವಾರರು ಕೆಸರಿನ ಮಣ್ಣಿನ ಸ್ನಾನ ಮಾಡಿಕೊಂಡೆ ಮುಂದೆ ಸಾಗಬೇಕಾಗಿದೆ. ಇದಲ್ಲದೆ ತಾಲೂಕಿನಾದ್ಯಂತ ತಂಬಾಕು ಹದ ಮಾಡುವ ಕಾರ್ಯವು ಪ್ರಾರಂಭವಾಗಿದ್ದು, ಮಳೆಯಿಂದ ಹೊಡೆತ ಬಿದ್ದಿದೆ. ಮಳೆಯ ಕಾರಣ ತಂಬಾಕು ಬೇಯಿಸುವ ಬ್ಯಾರನ್ಗಳು ಕುಸಿದು ಬೀಳುವ ಸ್ಥಿತಿ ತಲುಪಿದೆ.
ಇನ್ನು ವಿವಿಧ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದೆ. ಇದರಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಜಾಗರೂಕತೆ ವಹಿಸಲಾಗಿದೆ.