ಚಾಮರಾಜನಗರ: ಕೆರೆಯಲ್ಲಿ ಸಾಕಲಾಗುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲೆದೇವನಹಳ್ಳಿಯಲ್ಲಿ ನಡೆದಿದ್ದು, ದುಷ್ಕರ್ಮಿಗಳು ವಿಷ ಹಾಕಿದ್ದರಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕೆರೆಯನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕೆರೆಗೆ ಮೀನು ಮರಿಗಳನ್ನು ಬಿಟ್ಟು ಸಾಕಾಣೆ ಮಾಡುತ್ತಿದ್ದರು. ಮೀನುಗಳು ಚೆನ್ನಾಗಿ ಬೆಳವಣಿಗೆ ಹೊಂದಿದ್ದವು. ಆದರೆ ಇದೀಗ ಅವು ಸಾಮೂಹಿಕವಾಗಿ ಸಾವನ್ನಪ್ಪಿರುವುದು ಗುತ್ತಿಗೆದಾರರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.
ಮೂರು ದಿನಗಳ ಹಿಂದೆ ಯಾರೋ ದುಷ್ಕರ್ಮಿಗಳು ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಅವರನ್ನು ಅವರನ್ನು ಬೆದರಿಸಿ ಓಡಿಸಲಾಗಿತ್ತು ಎನ್ನಲಾಗಿದ್ದು, ಈ ದ್ವೇಷಕ್ಕೆ ದುಷ್ಕರ್ಮಿಗಳು ವಿಷ ಹಾಕಿದ್ರಾ ಎಂಬ ಶಂಕೆಯನ್ನು ಗುತ್ತಿಗೆದಾರರು ವ್ಯಕ್ತಪಡಿಸಿದ್ದಾರೆ. ಇನ್ನು ಮೀನುಗಳ ಸಾಮೂಹಿಕ ಸಾವಿಗೆ ಕೆರೆಯಲ್ಲಿ ನೀರು ಕಡಿಮೆಯಾಗಿ ಮೀನುಗಳಿಗೆ ಆಮ್ಲಜನಕದ ಕೊರತೆ ಉದ್ಭವಿಸಿ ಇಲ್ಲವೆ ಕೆರೆಯ ಹೂಳಿನ ಮಣ್ಣು ಮೀನುಗಳ ಕಿವಿರುಗಳಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂಬ ಅಭಿಪ್ರಾಯವನ್ನು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಮೀನುಗಳ ಸಾವಿಗೆ ನೈಜ ಕಾರಣ ಏನು ಎಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ.