ಮಾಗಡಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಿ ಮತಸೆಳೆಯಲು ತಂದಿದ್ದ ಹಣ ಮತ್ತು ಸೀರೆಯನ್ನು ಚುನಾವಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಉಡುವೆಗೆರೆಯ ಬಸವೇಶ್ವರ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.
ಉಡುವೆಗೆರೆಯ ಬಸವೇಶ್ವರ ಕಾಲೋನಿಯ ಪರಮಶಿವಯ್ಯ ಮನೆಯಲ್ಲಿ 58 ಹಾಗೂ ಶಿವಲಿಂಗಯ್ಯ ಎಂಬುವವರ ಮನೆಯಲ್ಲಿ 50 ಸೀರೆಗಳು ಪತ್ತೆಯಾಗಿದ್ದು, ಮತದಾರರಿಗೆ ಹಂಚಲು ತರಿಸಲಾಗಿತ್ತು ಎಂದು ತಿಳಿದುಬಂದಿದೆ. ಯಾವ ಪಕ್ಷಕ್ಕೆ ಸೇರಿದ್ದು ಎಂಬುದು ಚುನಾವಣಾಧಿಕಾರಿ ಖಚಿತಪಡಿಸಿಲ್ಲ.
ದಾಳಿಯ ವೇಳೆಯಲ್ಲಿ ಬೈಕ್ ನಲ್ಲಿ 1 ಲಕ್ಷದ 48 ಸಾವಿರ ಹಣವನ್ನು ರಸ್ತೆ ಬದಿಯಲ್ಲಿ ಎಸೆದು ಬೈಕ್ ಸವಾರ ಪರಾರಿಯಾಗಿದ್ದಾನೆ.
ಈ ಹಣವು ಮತದಾರರಿಗೆ ಹಂಚಲು ತರಲಾಗಿತ್ತದೆಂದು ತಿಳಿದುಬಂದಿದೆ, ಯಾವ ಪಕ್ಷಕ್ಕೆ ಸೇರಿದೆ ಎಂಬುದು ತಿಳಿದಿಲ್ಲ ಎಂದು ಆರ್ ಕೃಷ್ಣಮೂರ್ತಿ ಹೇಳಿದ್ದಾರೆ. ಶುಕ್ರವಾರ ಬೆಳಗ್ಗೆ 10.30ರ ಸಮಯದಲ್ಲಿ ಗ್ರಾಮಸ್ಥರು ನೀಡಿದ ಖಚಿತ ಮಾಹಿತಿ ಮೇರೆಗೆ ಚುನಾವಣೆ ನೀತಿ ಸಂಹಿತೆ ತಂಡದ ಅಶೋಕ್, ಅಬಕಾರಿ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ, ಮಾಗಡಿ ಎಎಸ್ಐ ಮರೀಸ್ವಾಮಿ, ಪಿಸಿ ನರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಸ್ಥಳದಲ್ಲಿ ಸೀರೆ ಮತ್ತು ಹಣ ಪತ್ತೆಯಾಗಿದೆ, ಹಣ ಮತ್ತು ಸೀರೆಯನ್ನು ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.