ಭಾರತೀನಗರ: ಅಧಿಕಾರಿಗಳಿಬ್ಬರ ದುರಾಡಳಿತ ಮತ್ತು ದುರ್ವತನೆ ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಹಾಗೂ ಸಮತಾ ಸೈನಿಕ ದಳ ಸಂಘಟನೆಗಳ ಕಾರ್ಯಕರ್ತರು ಮತ್ತು ಕೆಲ ಸದಸ್ಯರು ಜಮಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀನಗರ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಬಸವರಾಜು ಮತ್ತು ಕಾರ್ಯದರ್ಶಿ ಲೋಕೇಶ್ ಅವರು ಸಾರ್ವಜನಿಕ ಕಾರ್ಯನಿರ್ವಹಣೆಯಲ್ಲಿ ದುರಾಡಳಿತ ಮೆರೆಯುತ್ತಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳು ಆಗದಂತೆ ತೊಂದರೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಹರಸಾಹಸ ಪಡುವ ರೀತಿಯಲ್ಲಿ ಸದರಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದು, ಲಂಚದಾಸೆಗೆ ಸಾರ್ವಜನಿಕ ಕೆಲಸಗಳಿಗೆ ಯಾವುದೇ ರೀತಿ ಸ್ಪಂದಿಸದೆ. ಅಸಮರ್ಪಕ ರೀತಿಯ ಕಾರ್ಯನಿರ್ವಹಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ಸರ್ಕಾರ ನೀಡಿರುವ ಮೊಬೈಲ್ ಗೆ ಕರೆ ಮಾಡಿದರೆ ಕರೆ ಸ್ವೀಕರಿಸದೆ ಇಷ್ಟಬಂದ ರೀತಿ ವರ್ತಿಸುತ್ತಾರೆಂದು ಕಿಡಿ ಕಾರಿದರು.
ಭಾರತೀನಗರ ಸುತ್ತಮುತ್ತಲ ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದ್ದು, ಮದ್ದೂರು ತಾಲೂಕಿನಲ್ಲೇ ಅತಿ ಮುಖ್ಯವಾದ ಗ್ರಾಮ ಪಂಚಾಯಿತಿಯಾಗಿದೆ. ಇಂತಹ ಸ್ಥಳದಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯಿಂದ ಭ್ರಷ್ಟಾಚಾರ ಮೇಳೈಸಿದೆ ಎಂದು ದೂರಿದರು.
ಇ-ಸ್ವತ್ತು ಮಾಡಿಸಲು ಸಾರ್ವಜನಿಕರು ಪಂಚಾಯಿತಿಗೆ ಬಂದರೆ, ಅವರನ್ನು ಹಲವಾರು ಬಾರಿ ಪಂಚಾಯಿತಿಗೆ ಅಲೆದಾಡಿಸಿ ಸಾರ್ವಜನಿಕರು ತಾವಾಗಿಯೇ ಲಂಚ ನೀಡಲು ಮುಂದಾಗುವಂತೆ ಮಾಡುವ ಅಧಿಕಾರಿಗಳು ಪಂಚಾಯಿತಿಯ 2-3 ಸದಸ್ಯರನ್ನು ದಲ್ಲಾಳಿಗಳನ್ನಾಗಿಸಿಕೊಂಡು ಅವರ ಮೂಲಕ ಲಂಚ ಪಡೆದು ನಂತರ ಸಾರ್ವಜನಿಕರ ಕೆಲಸ ಮಾಡುತ್ತಿದ್ದಾರೆ ಎಂದು ಚಿಕ್ಕರಸಿನಕೆರೆ ಹೋಬಳಿ ಘಟಕದ ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಆರೋಪಿಸಿದರು.