ಮೈಸೂರು: ರೈತರು ತಮ್ಮ ಬೆಳೆಗಳಿಗೆ ತಾವೇ ಬ್ರಾಂಡಿಂಗ್ ಮಾಡಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ.
ನಗರದ ಸಿಎಫ್ಟಿಆರ್ಐ ಸಭಾಂಗಣದಲ್ಲಿ ಲಘು ಉದ್ಯೋಗ ಭಾರತ್, ಐಎಂಎಸ್ ಫೌಂಡೇಷನ್, ಸಿಎಸ್ಐಆರ್-ಸಿಎಟಿಆರ್ಐ ಸಹಯೋಗದಲ್ಲಿ ಆಯೋಜಿಸಿದ್ದ 3 ದಿನಗಳ ಟೆಕ್ ಭಾರತ್-2022ತಂತ್ರಜ್ಞಾನ ಪ್ರದರ್ಶನ, ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ರೈತರನ್ನು ಕೇವಲ ಬೆಳೆ ಬೆಳೆಯಲು ಮಾತ್ರ ಸೀಮಿತಗೊಳಿಸಲಾಗಿತ್ತು. ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಿರಲಿಲ್ಲ. ಇಂದು ಕೃಷಿಕ್ಷೇತ್ರ ಬದಲಾವಣೆಯ ದಿಕ್ಕಿನತ್ತ ಸಾಗುತ್ತಿದೆ. ರೈತರ ಬೆಳೆ ನೇರವಾಗಿ ಗ್ರಾಹಕರಿಗೆ ತಲುಪಿದಾಗ ಮಾತ್ರ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗಿದೆ. ಅದಕ್ಕಾಗಿ ತಾವು ಬೆಳೆದ ಬೆಳೆಗಳನ್ನು ಸಂಸ್ಕರಣೆ ಮಾಡಿ ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಪ್ಯಾಕ್ ಮಾಡಬೇಕು. ತಾವೇ ಬ್ರಾಂಡಿಂಗ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಆಗ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದರು.
ರೈತರು ಆರ್ಥಿಕವಾಗಿ ಸದೃಢವಾಗಬೇಕಾದರೆ ಸ್ಟಾರ್ಟ್ ಅಪ್ ಆರಂಭಿಸಬೇಕು. ಇದರಿಂದ ಹೆಚ್ಚಿನ ಅನುಕೂಲ ಪಡೆದುಕೊಳ್ಳಬಹುದು. 2014ರಿಂದ 2018ರವರೆಗೆ ರಾಜ್ಯದಲ್ಲಿ 50 ಸಾವಿರ ಕೃಷಿ ಸಂಬಂಧಿಸಿದ ಸ್ಟಾರ್ಟ್ಅಪ್ ಶುರುವಾಗಿವೆ. ಈ ಅವಧಿಯಲ್ಲಿ ದೇಶದಲ್ಲಿ 1.70 ಲಕ್ಷ ಮತ್ತು ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. 2014ರಲ್ಲೇ ಸ್ಥಾಪನೆಯಾದ 970 ಸ್ಟಾರ್ಟ್ಅಪ್ಗಳ ಪೈಕಿ ಕೃಷಿ ಸೇರಿದ 474ಹೊಸ ಉದ್ಯಮಗಳು ಪ್ರಾರಂಭವಾಗಿದೆ. ಸಿಎಫ್ಟಿಆರ್ಐ ವತಿಯಿಂದ 500ಜನರಿಗೆ ಕೃಷಿ ಸಂಸ್ಕರಣೆ ಮಾಡಲು ತಂತ್ರಜ್ಞಾನ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಿಎಫ್ಟಿಆರ್ಐ ತಂತ್ರಜ್ಞಾನಗಳ ಕಿರುಹೊತ್ತಿಗೆ, ಸಿರಿಧಾನ್ಯ ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿಎಫ್ಟಿಆರ್ಐನ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಇನ್ಫೋಸಿಸ್ ಮಾಜಿ ಅಧಕ್ಷ ಕ್ರಿಸ್ ಗೋಪಾಲಕೃಷ್ಣ, ಲಘು ಉದ್ಯೋಗ ಭಾರತ್ ಅಧಕ್ಷ ಸಚಿನ್ ಸೇರಿದಂತೆ ಹಲವರು ಇದ್ದರು.