ಮೈಸೂರು: ರಸ್ತೆ ಬದಿಯಲ್ಲೇ ಮದ್ಯಪಾನ ಮಾಡುತಿದ್ದ ಮೂವರು ವ್ಯಕ್ತಿಗಳನ್ನು ಪ್ರಶ್ನಿಸಿದ ಕಾರಣಕ್ಕೆ ಪೊಲೀಸ್ ಕಾನ್ಸ್ಟೇಬಲ್ ಒರ್ವರನ್ನು ನಿಂದಿಸಿ ಶರ್ಟ್ ಹರಿದ ಘಟನೆ ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಬಂಧಿತರನ್ನು ಕೆ.ಜಿ.ಕೊಪ್ಪಲಿನ ನಿವಾಸಿ ಮಹೇಶ್, ಜಯನಗರದ ನಿವಾಸಿ ಹೇಮ್ ಕುಮಾರ್, ಶ್ರೀರಾಂಪುರ ನಿವಾಸಿ ದರ್ಶನ್ ಎಂದು ಗುರುತಿಸಲಾಗಿದ್ದು ಇವರು ಶನಿವಾರ ರಾತ್ರಿ ೯ ಘಂಟೆಯ ಸಮಯದಲ್ಲಿ ಟಿಟಿಎಲ್ ಕಾಲೇಜ್ ಬಳಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಮಹದೇವ್ ಎಂಬವರು ಸ್ಥಳಕ್ಕೆ ಬಂದು ಲಾಕ್ ಡೌನ್ ಸಂದರ್ಭದಲ್ಲಿ 7 ಗಂಟೆಯ ನಂತರ ರಸ್ತೆಯಲ್ಲಿ ಯಾರೂ ಇರಬಾರದು ಎಂದು ಹೇಳಲಾಗಿದ್ದು ಸೆಕ್ಷನ್ ಜಾರಿಯಲ್ಲಿರುವುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದಾಗ ಕರ್ತವ್ಯ ನಿರತ ಪೊಲೀಸ್ ಮಹದೇವ್ ಅವರನ್ನು ಏಕವಚನದಲ್ಲಿ ಮಾತನಾಡಿಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದೇ ವೇಳೆ ಸಬ್ ಇನ್ಸಪೆಕ್ಟರ್ ಭವ್ಯ ಅವರು ಸ್ಥಳಕ್ಕೆ ತೆರಳಿದಾಗಲೂ ಅವರಿಗೂ ಏಕವಚನದಲ್ಲಿ ಪದ ಪ್ರಯೋಗ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಇಲ್ಲಿಂದ ಹೊರಡಿ ಎಂದು ಹತ್ತಿರ ಹೋದ ಮಹದೇವ್ ಅವರ ಶರ್ಟ್ ಹರಿದಿದ್ದಾರೆ ಎನ್ನಲಾಗಿದೆ.
ತಕ್ಷಣ ಸಬ್ ಇನ್ಸಪೆಕ್ಟರ್ ಭವ್ಯ ಮತ್ತು ಮಹದೇವ್ ಕಾರ್ಯಪ್ರವೃತ್ತರಾಗಿದ್ದು, ಮೂವರನ್ನು ಬಂಧಿಸಿ ಠಾಣೆಗೆ ಕರೆದು ತಂದಿದ್ದಾರೆ. ಠಾಣೆಯಲ್ಲಿ ಕೂಡ ಮೂವರು ರಂಪಾಟ ನಡೆಸಿದ್ದರು. ಬಳಿಕ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.