ಸರಗೂರು : ಸಮೀಪದ ಮಾದಾಪುರ ಗ್ರಾಮದಲ್ಲಿನ ಜನರಲ್ಲಿ ಸಾಮೂಹಿಕ ಜ್ವರದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಾಲೂಕು ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಜ್ವರದ ಲಕ್ಷಣಗಳು ಹರಡದಂತೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ.
ಗ್ರಾಮದಲ್ಲಿ ಇದ್ದಕ್ಕಿದಂತೆ ಸಾಮೂಹಿಕ ಜ್ವರದ ಲಕ್ಷಣಗಳು ಕಂಡು ಬಂದು ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿದ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಚ್.ಎಂ.ಚಂದ್ರಕಲಾ ಅವರು ವಿಷಯವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಟಿಎಚ್ಒ ರವಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದಲ್ಲದೆ ತಪಾಸಣೆ ನಡೆಸಿ, ಜ್ವರ ಲಕ್ಷಣಗಳ ಹತೋಟಿಗೆ ಕ್ರಮ ವಹಿಸುಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಮೂಲಗಳ ಬಗ್ಗೆ ಗಮನಹರಿಸಿ ಅಲ್ಲಿ ಸ್ವಚ್ಛತೆಯನ್ನು ನಡೆಸಿ ನೀರಿನ ಮಾದರಿ ಸಂಗ್ರಹಣೆ ಮಾಡಬೇಕು. ಸಾರ್ವಜನಿಕರು ಪ್ರತಿದಿನ ಕುದಿಸಿ ಆರಿಸಿದ ನೀರನ್ನೇ ಸೇವಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕೂಡಲೇ ಎಚ್ಚೇತ್ತುಕೊಂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಟಿಎಚ್ಒ ಡಾ.ಟಿ.ರವಿಕುಮಾರ್ ಮಾರ್ಗದರ್ಶನದಲ್ಲಿ ಗ್ರಾಮದ ಮನೆ, ಮನೆಗಳಿಗೆ ಭೇಟಿ ನೀಡಿ ಜ್ವರ, ಲಾರ್ವ ಸಮೀಕ್ಷೆ ನಡೆಸಿದರು. ಸೊಳ್ಳೆ ನಾಶಕಗಳನ್ನು ಸಿಂಪಡಿಸಿದರು. ಇದಲ್ಲದೆ ಪಂಚಾಯಿತಿ ವತಿಯಿಂದ ನೀರಿನ ತೊಟ್ಟಿಗಳು, ಚರಂಡಿ, ನೀರಿನ ಟ್ಯಾಂಕ್ ಸೇರಿದಂತೆ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿದರು. ಅಲ್ಲದೆ ಗ್ರಾಮದಲ್ಲಿನ ಪ್ರತಿ ಬೀದಿಗಳನ್ನು ಸ್ವಚ್ಛಗೊಳಿಸಿದರು.
ಗ್ರಾಮದಲ್ಲಿ ಹೊಡೆದು ನೀರಿನ ಪೈಪ್ಲೈನ್ಗಳನ್ನು ರಿಪೇರಿ ಮಾಡಿಸಿ, ಚರಂಡಿ, ಬೀದಿಗಳಲ್ಲಿ ಬ್ಲಿಚಿಂಗ್ ಪೌಡರ್ಗಳನ್ನು ಅಳವಡಿಸಲಾಯಿತು. ನೀರಿನ ಮಾದರಿಗಳನ್ನು ಪರೀಕ್ಷೆಗೆಂದು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಜ್ವರ ಕಂಡು ಬರದಂತೆ ಸಂಪೂರ್ಣವಾಗಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಯಿತು. ಸೊಳ್ಳೆಗಳ ಉತ್ಪತ್ತಿ ತಾಣಗಳು, ಸ್ವಚ್ಛತೆ ಸೇರಿದಂತೆ ನೀರನ್ನು ಕುದಿಸಿ ಹಾರಿಸಿ ಕುಡಿಯುವಂತೆ ಆರೋಗ್ಯ ಶಿಕ್ಷಣ ನೀಡಲಾಯಿತು. ಗುಂಪು ಸಭೆ ನಡೆಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇದರಿಂದಾಗಿ ಪ್ರಕರಣ ನಿಯಂತ್ರಣಕ್ಕೆ ಬರುವಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರ ಹಿರಿಯ ಮೇಲ್ವಿಚಾರಕ ನಾಗೇಂದ್ರ, ವೈದ್ಯಾಧಿಕಾರಿ ಡಾ.ಎಚ್.ಎಂ.ಚಂದ್ರಕಲಾ ಹಾಗೂ ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಗ್ರಾಮಸ್ಥರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.