ಮೈಸೂರು: ತಮಿಳುನಾಡಿಗೆ ಹೋದಾಗ ಪ್ರಕಾಶ್ ರಾಜ್ ಆಗ್ತಾರೆ, ಕರ್ನಾಟಕಕ್ಕೆ ಬಂದಾಗ ಪ್ರಕಾಶ್ ರೈ ಆಗ್ತಾರೆ ಇವರ ಉದ್ದೇಶ ಹಾಗೂ ದಂಧೆಗೆ ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ, ಅದೇ ರೀತಿ ಇವರ ಚಿಂತನೆಗಳು ಹಾಗೂ ನಿಲುವುಗಳು ಬದಲಾಗುತ್ತವೆ ಎಂದು ಸಂಸದ ಪ್ರತಾಪ್ ಸಿಂಹ ನಟ ಪ್ರಕಾಶ ರಾಜ್ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಇಂದು ಅರಮನೆಯ ಆವರಣದಲ್ಲಿ ಗಜ ಪಡೆಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಿನ್ನೆ ಕಾರ್ಯಕ್ರಮವೊಂದರಲ್ಲಿ ಪ್ರಕಾಶ ರಾಜ್ ಪ್ರಧಾನಿ ಮೋದಿ ನನಗಿಂತ ಒಳ್ಳೆಯ ನಟ ಎಂಬ ಹೇಳಿಕೆಗೆ ತೀರುಗೇಟು ನೀಡಿದ ಪ್ರತಾಪ್ ಸಿಂಹ, ಗೌರಿ ಲಂಕೇಶ ಹತ್ಯೆಗೂ ಪ್ರಧಾನಿ ಮೋದಿ ಅವರಿಗೆ ಏನು ಸಂಬಂಧವಿದೆ. 17 ಕೋಟಿ ವೋಟ್ ಪಡೆದು 3 ವರ್ಷ 3 ತಿಂಗಳು ಒಂದು ದಿನವೂ ರಜೆಯನ್ನ ಪಡೆಯದೆ ಇಡೀ ದೇಶದ ಜನರ ಬಗ್ಗೆ ಯೋಚನೆ ಮಾಡುತ್ತಿರುವ ಪ್ರಧಾನಿಯ ಬಗ್ಗೆ ಈ ರೀತಿಯ ಮಾತನಾಡುತ್ತಾರಲ್ಲ, ಇವರ ವಿವೇಚನೆ ಎಲ್ಲಿ ಹೋಗಿದೆ. ಸಾರ್ವಜನಿಕರ ಜೀವನದಲ್ಲಿ ಕನಿಷ್ಟ ಸೌಜನ್ಯ ಉಳಿಸಿಕೊಳ್ಳುವ ಜ್ಞಾನ ಇಲ್ವ ಎಂದು ಪ್ರಶ್ನೆ ಮಾಡಿದರು.
ಪ್ರಕಾಶ್ ರೈ ಅವರ ಆಪ್ತೆ ಗೌರಿ ಲಂಕೇಶ ಹತ್ಯೆಯಾದ ಕೂಡಲೇ ಇಷ್ಟು ನೋವಾಗುತ್ತಲ್ಲಾ, ಪ್ರಕಾಶ ರಾಜ್ ಅವರ ಮೂಲ ಊರಾದ ಬಂಟ್ವಾಳದಲ್ಲಿ ಹರೀಶ ಮಡಿವಾಳ್ ಅವರ ಹತ್ಯೆಯಾಯಿತು, ಮೈಸೂರಿನಲ್ಲಿ ರಾಜು ಹತ್ಯೆಯಾಯಿತು, ಕೊಡಗಿನಲ್ಲಿ ಕುಟ್ಟಪ್ಪ ಪ್ರಶಾಂತ ಪೂಜಾರಿ ಹತ್ಯೆಯಾಯಿತು, ಮೂಡಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯಾಯಿತು, ಕನ್ನಡಿಗನಾದವನಿಗೆ ಯಾರೇ ಕನ್ನಡಿಗನ ಹತ್ಯೆಯಾದರು ಅವರಿಗೆ ನೋವಾಗಬೇಕಾಗಿತ್ತು. ಆದರೆ ಪ್ರಕಾಶ್ ರಾಜ್ ಆವಾಗೆಲ್ಲ ನೋವಾಗಿಲ್ಲ ಎಂದು ಪ್ರಕಾಶ ರೈ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಪ್ರಕಾಶ್ ರಾಜ್ ಒಳ್ಳೆಯ ನಟ ಎಂದು ನಾವೆಲ್ಲಾ ಭಾವಿಸಿದ್ದೇವೆ. ಆದರೆ ಸಾರ್ವಜನಿಕರ ಜೀವನದಲ್ಲಿ ಅವರು ತೆಗೆದುಕೊಳ್ಳುತ್ತಿರುವ ನಿಲುವುಗಳು ಹಾಗೂ ನೀಡುತ್ತಿರುವ ಹೇಳಿಕೆಗಳು ಚಲನಚಿತ್ರಗಳಲ್ಲಿ ಖಳ ನಟನ ಪಾತ್ರಗಳನ್ನ ಮಾಡಿ ಮಾಡಿ ಅವರ ನಿಜ ಜೀವನದಲ್ಲೂ ಖಳ ನಟನಂತೆ ವರ್ತಿಸುತ್ತಿದ್ದಾರೆ. ಪ್ರಕಾಶ್ ರಾಜ್ ಇದೇ ರೀತಿಯ ವರ್ತನೆ ಮುಂದುವರೆಸಿದರೆ ಅವರು ಯಾವ ಸಾರ್ವಜನಿಕರ ವೇದಿಕೆಗಳಲ್ಲಿ ಪ್ರಧಾನಿ ಬಗ್ಗೆ ಮಾತನಾಡುತ್ತಾರೋ ಅದೇ ವೇದಿಕೆಯಲ್ಲಿ ನಾವು ಸರಿಯಾದ ಉತ್ತರ ಕೊಡುವ ವೇದಿಕೆ ನಿರ್ಮಾಣವಾಗುತ್ತದೆ.ಇನ್ನು ಮುಂದೆ ಎಚ್ಚೆತ್ತುಕೊಂಡು ಜವಾಬ್ದಾರಿಯುತವಾಗಿ ಹೇಳಿಕೆಯನ್ನ ಕೊಡಬೇಕು.
ಒಂದು ವರ್ಷದ ಹಿಂದೆ ಕಾವೇರಿ ವಿಚಾರದಲ್ಲಿ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ನಾನೊಬ್ಬ ನಟ ನಟನಾಗಿ ಇರಲು ಬಿಡಿ ಎಂದು ಹೇಳಿದ್ದೀರಿ, ಇವತ್ತು ಏಕೆ ರಾಜಕೀಯ ನಿಲುವುಗಳನ್ನ ತಾಳುತ್ತಿದ್ದೀರಿ. ತಮಿಳನಾಡಿಗೆ ಹೋಗಿ ಅಲ್ಲಿನ ರೈತರ ಪರವಾಗಿ ಹೋರಾಟವನ್ನ ಮಾಡುತ್ತಿರಾ. ಕಳೆದ ವರ್ಷ ಕರ್ನಾಟಕದ ರೈತರು ಸಹ ಕುಡಿಯಲು ನಮ್ಮಲ್ಲಿ ನೀರಿಲ್ಲ, ನಮ್ಮ ಗದ್ದೆಗಳಿಗೆ ನೀರಿಲ್ಲ, ಎಂದು ನಮ್ಮ ರೈತರು ಸಹ ಹೋರಾಟವನ್ನ ಮಾಡಿದರು. ಆಗ ನಟ ಎಂದು ಹೇಳಿ ಗೋಸುಂಬೆ ತರ ತಪ್ಪಿಸಿಕೊಳ್ಳಲು ನೋಡಿದ್ರಲ್ಲಾ, ಇಂದು ರಾಜಕೀಯದ ನಿಲುವುಗಳನ್ನ ಏಕೆ ತೆಗೆದುಕೊಳ್ಳುತ್ತೀದ್ದೀರಿ.
ಕಾವೇರಿ ಬಗ್ಗೆ ಮಾತನಾಡಲು ಆಗುವುದಿಲ್ಲ, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುವುದನ್ನ ಬಿಟ್ಟು ದೇಶದ ಪ್ರಧಾನಿಯ ಬಗ್ಗೆ ಮಾತನಾಡುತ್ತೀರಾ, ಇಂತಹ ಇಬ್ಬಂದಿ ಹಾಗೂ ದ್ವಂಧ ನಿಲುವನ್ನ ಆದಷ್ಟು ಬೇಗ ಬಿಡಿ ಇಲ್ಲದಿದ್ದರೆ ಸಾರ್ವಜನಿಕೆ ವೇದಿಕೆಯಲ್ಲಿ ನಿಮಗೆ ಉತ್ತರ ಕೊಡುವ ಕೆಲಸವನ್ನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.