ಗುಡಿಬಂಡೆ: ಎಡೆಬಿಡದೆ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಗುಡಿಬಂಡೆ ಅಮಾನಿಬೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಇದನ್ನು ವೀಕ್ಷಿಸಲು ಜನ ಸಾಗರವೇ ಹರಿದು ಬರುತ್ತಿದೆ.
ಕಳೆದ ಹತ್ತು ವರ್ಷಗಳಿಂದ ತಾಲೂಕಿನಾದ್ಯಂತ ಬರಗಾಲ ಆವರಿಸಿದ್ದು, ಕುಡಿಯಲು ನೀರಿಲ್ಲದೆ, ಜನ ಜಾನುವಾರಗಳು ಕಂಗಾಲಾಗಿದ್ದವು. ಆದರೆ ಇದೀಗ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಮಾನಿಬೈರಸಾಗರ ಕರೆ ತುಂಬಿ ಕೋಡಿ ಹರಿದಿದ್ದು, ಝರಿಯಂತೆ ಧುಮುಕುತ್ತಿರುವ ಸುಂದರ ದೃಶ್ಯವನ್ನು ವೀಕ್ಷಿಸಲು ಎಲ್ಲೆಡೆಯಿಂದ ಜನ ಹರಿದು ಬರುತಿದ್ದು ಜನ ನೀರಿನಲ್ಲಿ ಕುಣಿದು ಕುಪ್ಪಳಿಸಿ ಸಂತಸ ಪಡುತ್ತಿದ್ದಾರೆ.
ಜನ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ವಾಹನ ಸವಾರರು ಪ್ರಯಾಣಿಸಲು ಪರದಾಡುತ್ತಿದ್ದರೆ, ವಾಹನಗಳನ್ನು ಸುಗಮವಾಗಿ ಸಂಚರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳ ಮಹಿಳೆಯರು ಕೆರೆಗೆ ಪೂಜೆ ಹಾಗೂ ಬಾಗಿನ ಅರ್ಪಿಸಿದ್ದು ಕಂಡು ಬಂತು.
ಅಮಾನಿಬೈರಸಾಗರ ಕೆರೆಯಲ್ಲಿ ತುಂಬಾ ಹೂಳು ತುಂಬಿದ್ದು, ಈ ಹಿಂದೆ ಆರ್ ಆರ್ ಎಂಬ ಯೋಜನೆಯಲ್ಲಿ ಹೂಳೆತ್ತುವ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಲಾಗಿತ್ತು. ಆದರೆ ಈ ಕಾಮಗಾರಿಗಳು ಕಳಪೆಯಿಂದ ಕೂಡಿದೆ. ಯಾವುದೇ ರೀತಿಯ ಹೂಳೆತ್ತುವ ಕಾಮಗಾರಿ ನಡೆದಿಲ್ಲ. ಕೆರೆಯ ಕಟ್ಟೆಯ ತುಂಬಾ ಗಿಡಗಂಟಿಗಳಿಂದ ಕೂಡಿದೆ. ಆದ್ದರಿಂದ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸಂಬಂಧಪಟ್ಟ ಇಲಾಖೆ ಕೈಗೆತ್ತಿಕೊಳ್ಳಬೇಕು, ಇದಕ್ಕೆ ಜನಪ್ರತಿನಿಧಿಗಳ ಶ್ರಮ ಅಗತ್ಯವಾಗಿದೆ ಎಂದು ತಾಲೂಕಿನ ಜನತೆ ಆಗ್ರಹಿಸಿದ್ದಾರೆ.