ಮಂಡ್ಯ: ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಣವಾಗಿ ಬರುತ್ತಿರುವುದರಿಂದ ಜನ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೆಲವು ಬಡಾವಣೆಗಳ ಮನೆಗಳಿಗೆ ಸರಬರಾಜು ಮಾಡಲು ಹಾಕಿರುವ ನೀರಿನ ಪೈಪ್ಗಳಲ್ಲಿ ಚರಂಡಿ ನೀರು ಮಿಶ್ರಣಗೊಂಡು ಬರುತ್ತಿದ್ದು ಇದರಿಂದ ಆಕ್ರೋಶಗೊಂಡ ಜನ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ಅಶೋಕ ನಗರದ ವಾಸಿ ಮಾಜಿ ಪುರಸಭಾ ಸದಸ್ಯ ಮುತ್ತುರಾಜ್ ಅವರ ಮನೆಯ ಮುಂದಿನ ಕೊಳಾಯಿಯಲ್ಲಿ ಕುಡಿಯುವ ನೀರಿನ ಜೊತೆಗೆ ಒಳಚರಂಡಿ ನೀರು ಮಿಶ್ರಿತವಾಗಿ ಬರುತ್ತಿದ್ದುದ್ದನ್ನು ಕಂಡ ಅಲ್ಲಿನ ನಿವಾಸಿಗಳು ಪುರಸಭೆಯ ಗಮನಕ್ಕೆ ತಂದಿದ್ದಲ್ಲದೆ, ತೀವ್ರ ಆಕ್ರೋಶ ವ್ಯಕ್ರಪಡಿಸಿದ್ದಾರೆ.
ಈ ಭಾಗದ ಕೆಲವೆಡೆ ಒಳಚರಂಡಿ ಬಂದ್ ಆಗಿ ನೀರು ಹರಿಯದೆ ಒಳಚರಂಡಿ ನೀರು ರಸ್ತೆ ಮೇಲೆಲ್ಲ ಹರಿಯುತ್ತಿದ್ದು, ಈ ನೀರು ಪಕ್ಕದಲ್ಲೇ ಹಾದು ಹೋಗಿರುವ ಕುಡಿಯುವ ನೀರು ಪೂರೈಕೆಯಾಗುವ ಕೊಳಾಯಿಗೂ ಇಳಿದಿರಬಹುದು ಹೀಗಾಗಿ ಪೈಪ್ಗಳಲ್ಲಿ ಕುಡಿಯುವ ನೀರಿನೊಂದಿಗೆ ಮಿಶ್ರವಾಗಿ ಬರುತ್ತಿರಬಹುದು ಎಂದು ಜನ ಸಂಶಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಒಳಚರಂಡಿಗಳಿಂದಾಗಿರುವ ತೊಂದರೆ ಬಗ್ಗೆ ಪುರಸಭೆಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಡಾವಣೆಗಳ ಜನ ದೂರಿದ್ದಾರೆ. ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರವಾಗಿ ಬರುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನಿವಾಸಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ