ಮೈಸೂರು: ಇತ್ತೀಚೆಗಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಬಹಳಷ್ಟು ಕೆರೆಗಳು ಭರ್ತಿಯಾಗುತ್ತಿವೆ. ಕೆಲವು ಕೆರೆಗಳು ಮಳೆ ನೀರಿನಿಂದ ಭರ್ತಿಯಾಗಿದ್ದರೆ ಮತ್ತೆ ಕೆಲವು ಕೆರೆಗಳಿಗೆ ನದಿ ಮತ್ತು ಜಲಾಶಯಗಳಿಂದ ನೀರನ್ನು ತುಂಬಿಸಲಾಗುತ್ತಿದೆ. ಇದರಿಂದ ಊರಿನ ಕೆರೆಗಳು ತುಂಬಿ ನೀರು ಅಲೆಯಾಡುತ್ತಿರುವ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ.
ಈ ಹಿಂದೆ ಒಣಗಿ ಹೋಗಿ ಗಿಡಗಂಟಿಗಳು ಬೆಳೆದು ಮೈದಾನದಂತಾಗಿದ್ದ ಹೆಚ್ಚಿನ ಕೆರೆಗಳು ಕಳೆದ ಮೂರು ವರ್ಷಗಳಿಂದ ತುಂಬಿ ತುಳುಕುತ್ತಿವೆ. ಇದರಿಂದ ಜನ ಜಾನುವಾರುಗಳಿಗೆ ಅನುಕೂಲವಾಗಿರುವುದಲ್ಲದೆ, ಕೆರೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಹೆಚ್ಚಾಗಿದೆ.
ಈಗಾಗಲೇ ಹಲವು ಕಡೆಗಳಲ್ಲಿ ನದಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸುವ ಕಾರ್ಯ ನಡೆದಿರುವುದಲ್ಲದೆ, ಬಾಗಿನ ಅರ್ಪಿಸಿ ಜನ ಖುಷಿ ಪಡುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಇತ್ತೀಚೆಗೆ
ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಮದ ಕಾಳ ಸಿದ್ದನ ಕೆರೆ ಭರ್ತಿಯಾಗಿದ್ದು, ಗ್ರಾಮದ ಜನ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ಕೆರೆಗೆ ಬಾಗಿನ ಅರ್ಪಿಸಿದಲ್ಲದೆ, ಮೀನು ಮರಿಗಳನ್ನು ಬಿಟ್ಟು ಗ್ರಾಮಪಂಚಾಯಿತಿಗೆ ಆದಾಯದ ದಾರಿಯನ್ನು ಮಾಡಿಕೊಡಲಾಗಿದೆ.
ಒಂದು ಕಾಲದಲ್ಲಿ ಈ ಕಾಳಸಿದ್ಧನ ಕೆರೆಯು ಜನರಿಗೆ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿತ್ತು. ಜನಜಾನುವಾರುಗಳಿಗೆ ನೀರು ಒದಗಿಸುತ್ತಿತ್ತು. ಕೆರೆಯ ಪಕ್ಕದಲ್ಲಿಯೇ ಗ್ರಾಮದೇವತೆ ಪಟ್ಟಲದಮ್ಮನ ದೇವಸ್ಥಾನವಿದ್ದುದರಿಂದ ಐಹಿತ್ಯ ಹೊಂದಿತ್ತು. ಸುಮಾರು ಎರಡು ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿದ ಕೆರೆಯು ಗ್ರಾಮದ ಜನಕ್ಕೆ ಬಹುಪಯೋಗಿಯಾಗಿತ್ತು.
ಆದರೆ ಕಾಲಕ್ರಮೇಣ ಮಳೆಯ ಕೊರತೆ ಹಾಗೂ ಕೆರೆಯನ್ನು ಅಭಿವೃದ್ಧಿಗೊಳಿಸದ ಕಾರಣದಿಂದಾಗಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಮುಚ್ಚಿ ಹೋಗಿತ್ತು. ಒಂದು ರೀತಿಯಲ್ಲಿ ಪಾಳುಬಿದ್ದ ಮೈದಾನದಂತಾಗಿತ್ತು.
ಇಷ್ಟೇ ಮಾತ್ರವಲ್ಲದೆ ಗ್ರಾಮದೇವತೆ ಪಟ್ಟಲದಮ್ಮನ ದೇವಸ್ಥಾನದ ಪಕ್ಕದಲ್ಲಿ ಹಳೆಯ ಕಾಲದ ಕಲ್ಯಾಣಿಯಿದ್ದು ಅದು ಕೂಡ ಮುಚ್ಚಿ ಹೋಗಿದೆ. ಅದನ್ನು ನರೇಗಾ ಯೋಜನೆಯಲ್ಲಿ ಅಭಿವೃದ್ಧಿಗೊಳಿಸುವತ್ತ ನೀಲನಕ್ಷೆ ತಯಾರು ಮಾಡಲಾಗಿದೆ. ಇದೆಲ್ಲವೂ ಸರಿಹೋದರೆ ಗಾವಡಗೆರೆ ಸುಂದರ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
ಸದ್ಯ ಕಾಳಸಿದ್ಧನ ಕೆರೆಯನ್ನು ಗಾವಡಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಹಾರಂಗಿ ನಾಲೆಯ ಮೂಲಕ ನೀರನ್ನು ತುಂಬಿಸಲಾಗಿದೆ. ಇದರಿಂದ ಈ ಭಾಗದ ಸುಮಾರು 30 ಎಕರೆಗೂ ಹೆಚ್ಚು ರೈತರ ಜಮೀನಿಗೆ ನೀರು ಹರಿದು ಭತ್ತ ಬೆಳೆಯಲು ಅನುಕೂಲವಾಗಿದೆ. ಇಷ್ಟೇ ಅಲ್ಲದೆ, ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ, ಜಾನುವಾರುಗಳಿಗೆ ಕುಡಿಯುವ ನೀರು ದೊರಕಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಬಹಳಷ್ಟು ಕೆರೆಗಳು ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಂಡಿದ್ದು ಗ್ರಾಮದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿವೆ.