ಮೈಸೂರು: ಉತ್ತನಹಳ್ಳಿ ರಸ್ತೆಯಲ್ಲಿರುವ ಪರಶುನಾಯಕನ ಕೆರೆ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಆಕಸ್ಮಿಕವಾಗಿ ಆಯತಪ್ಪಿ ಕೆರೆಗೆ ಬಿದ್ದಿದ್ದು ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆದಿದೆ.
ನಗರದ ಕೈಲಾಶಪುರಂ ನಿವಾಸಿ ಗಣೇಶ್ (40) ಮೃತ ದುರ್ದೈವಿ. ಇನ್ನಿಬ್ಬರಿಗಾಗಿ ನುರಿತ ಈಜುಗಾರರು ಶೋಧ ನಡೆಸುತ್ತಿದ್ದಾರೆ. ಮೈಸೂರುನಗರದ ಹೊರವಲಯದ ಪಿಎಂಸಿ ಸಮೀಪದ ಪರಶುನಾಯಕನ ಕೆರೆ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಕೆರೆಗೆ ಉರುಳಿಬಿದ್ದಿದ್ದು, ಓರ್ವನ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಕೆ.ಆರ್.ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್, ಸಬ್ ಇನ್ಸ್ಪೆಕ್ಟರ್ ಸುನಿಲ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ನುರಿತ ಈಜುಗಾರರು ಕೆರೆಯಿಂದ ಶವಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.
ಈವರೆಗೆ ಓರ್ವನ ಶವವಷ್ಟೇ ಪತ್ತೆಯಾಗಿದೆ. ಈಚೆಗೆ ಸುರಿದ ಮಳೆಯಿಂದ ಕೆರೆಯಲ್ಲಿ ನೀರು ತುಂಬಿದ್ದು, ಹಸಿರು ಬೆಳೆದು ಪಾಚಿಕಟ್ಟಿದೆ. ಕೆ.ಆರ್. ಠಾಣೆ ಎಸಿಪಿ ಧರ್ಮಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.