ಮೈಸೂರು: ಎಂ.ಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಅವ್ಯವಹಾರ ನಡೆದಿದೆ ಎನ್ನಲಾದ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಶಾಸಕ ತನ್ವೀರ್ ಸೇಠ್ ಭ್ರಷ್ಟಚಾರ ನಿಗ್ರದ ದಳದ ಎಸ್ಪಿಗೆ ದೂರು ಸಲ್ಲಿಸಿದ್ದಾರೆ.
ಒಂದೇ ಕಾಮಗಾರಿಯಲ್ಲಿ ಎರಡೆರಡು ಬಿಲ್ ಮಾಡಿ 1.4 ಕೋಟಿ ರೂ.ಹಣ ಡ್ರಾ ಮಾಡಿರುವ ಸಂಬಂಧ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕಾರ್ಪೋರೇಟರ್ ಬಿ.ವಿ ಮಂಜುನಾಥ್ ಅವರು ಹಗರಣದ ಕುರಿತು ಚರ್ಚಿಸಿದರು. ಈ ನಿಟ್ಟಿನಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ಸತ್ಯ ಶೋಧನೆ ಸಮಿತಿಯನ್ನು ರಚಿಸಲಾಗಿದೆ ಎಂದು ತನ್ವೀರ್ ಸೇಠ್ ದೂರಿನಲ್ಲಿ ತಿಳಿಸಿದ್ದಾರೆ.
ಎಂ.ಜಿ ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ 1.40 ಕೋಟಿ ರೂ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿ ಕೊಂಡಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ದ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ತನ್ವೀರ್ ಸೇಠ್ ಕೋರಿದ್ದಾರೆ.