ಮಂಡ್ಯ: ವಿಜ್ಞಾನ ಮತ್ತು ವೈಜ್ಞಾನಿಕ ಪ್ರವೃತ್ತಿಗಾಗಿ ಯುವ ಜನತೆ ಎಂಬ ಧ್ಯೇಯವಾಕ್ಯದೊಡನೆ ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳಿಂದ ತಾಲೂಕಿನ ಪುಟ್ಟಿಕೊಪ್ಪಲು ಗ್ರಾಮದಲ್ಲಿ ರಸ್ತೆ, ಚರಂಡಿಗಳಿಗೆ ಕಾಯಕಲ್ಪ ಕೊಡುವ ಕಾರ್ಯ ಭರದಿಂದ ಸಾಗಿದೆ.
ಗ್ರಾಮದ ಶ್ರೀ ಕನಕದಾಸ ಪ್ರತಿಮೆ ಮುಂಭಾಗದ ಆವರಣದಲ್ಲಿ ಮಾ.3ರಂದು ಆರಂಭಗೊಂಡಿರುವ ಈ ಸೇವಾ ಯೋಜನೆ ಶಿಬಿರದಲ್ಲಿ ಸುಮಾರು ನೂರು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೂರು ತಂಡಗಳಾಗಿ ಶ್ರಮದಾನದಲ್ಲಿ ತೊಡಗಿದ್ದಾರೆ. ಈ ತಂಡಗಳ ಮೇಲುಸ್ತುವಾರಿ ವಹಿಸಿರುವ ಶಿಬಿರಾಧಿಕಾರಿಗಳಾದ ಲಿಂಗರಾಜು, ಜಗದೀಶ್ ಹಾಗೂ ನೇತ್ರಾವತಿ ಅವರು ಗ್ರಾಮದಲ್ಲಿ ಅತ್ಯಗತ್ಯವಿರುವ ಸ್ವಚ್ಛತೆ, ಚರಂಡಿಗಳ ನಿರ್ಮಾಣ, ಕಟ್ಟೆಗಳ ಪುನಶ್ಚೇತನ, ಚರಂಡಿಗಳ ಹೂಳೆತ್ತುವಿಕೆ ಮುಂತಾದ ಕೆಲಸಗಳನ್ನು ಮಾಡಿಸುವತ್ತ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಮಾ.3ರಂದು ಮಾರನಚಾಕನಹಳ್ಳಿ ಗ್ರಾಪಂ ಅಧ್ಯಕ್ಷ ಡಿ.ಚಿಕ್ಕಯ್ಯ ಅವರು ಶಿಬಿರದ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ನಾಗಾನಂದ ಮತ್ತಿತರರು ಪಾಲ್ಗೊಂಡಿದ್ದರು. ಅಂದು ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಮಾ.4ರಂದು ಬೆಳಿಗ್ಗೆ ಮಂಡ್ಯದ ಬೆಳಕು ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಸುಮಾರು 50 ಮಂದಿ ತಪಾಸನೆಗೊಳಗಾಗಿದ್ದು, ಅವರಲ್ಲಿ 25 ಮಂದಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದನ್ನು ಪತ್ತೆಹಚ್ಚಿದರು. ಬಳಿಕ ಖ್ಯಾತ ಚರ್ಮವೈದ್ಯ ಡಾ.ಶಂಕರೇಗೌಡರಿಂದ ಉಚಿತ ಚರ್ಮರೋಗ ತಪಾಸಣಾ ಶಿಬಿರ ನಡೆಯಿತು. ಗ್ರಾಮದ ನೂರಕ್ಕೂ ಹೆಚ್ಚುಮಂದಿ ಚಿಕಿತ್ಸೆ ಪಡೆದುಕೊಂಡರು.
ಬಳಿಕ ನಡೆದ ಜನಪದ ಗೀತೆಗಳ ತರಬೇತಿ ಕಾರ್ಯಾಗಾರದಲ್ಲಿ ಗ್ರಾಮದ ಯುವಜನರು ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆನಂತರ ಸಮಗ್ರ ತೋಟಗಾರಿಕೆ ಕೃಷಿ ಬಗ್ಗೆ ತೋಟಗಾರಿಕೆ ಉಪನಿರ್ದೇಶಕ ಎಂ.ಎ.ರಾಜು ಮಾಹಿತಿ ನೀಡಿದರೆ, ಹೈನುಗಾರಿಕೆಯ ಉತ್ಪನ್ನಗಳ ಬಗ್ಗೆ ತಿಳುವಳಿಕೆ ಕುರಿತು ದುದ್ದ ಪಶುವೈದ್ಯಾಧಿಕಾರಿ ಡಾ.ತ್ರಿನೇಶ್ ವಿಚಾರ ಮಂಡಿಸಿದರು.