ಚಿಕ್ಕಮಗಳೂರು: ಮುನ್ಸಿಪಾಲ್ ಆಸ್ಪತ್ರೆ ಒಳಗೆ ಹಿಂದಿನ ಎರಡು ಕಾಲುಗಳ ಪಾದಕ್ಕೆ ಹುಳ ಬಿದ್ದು ಓಡಾಡಲು ಪರದಾಡುತ್ತಿದ್ದ ಗೂಳಿಗೆ ಅನಿಮಲ್ ಕೇರ್ ಟ್ರಸ್ಟ್ ನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪಶುಸಂಗೋಪನ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಚಿಕಿತ್ಸೆ ನೀಡಲಾಯಿತು.
ಗೂಳಿ ಹಲವಾರು ದಿನಗಳಿಂದ ಕಾಲಿಗೆ ಹುಳ ಬಿದ್ದು ಸರಿಯಾಗಿ ನಡೆಯಲು ಸಾಧ್ಯವಾಗದೇ ಮಲಗಿದಲ್ಲೇ ಇತ್ತು. ಸಾರ್ವಜನಿಕರು ನೋಡಿಯೂ ನೋಡದಂತೆ ಹೋಗುತ್ತಿದ್ದರು. ಹಿಂದಿನ ಎರಡೂ ಕಾಲುಗಳಿಗೆ ಸಂಪೂರ್ಣ ಹುಳ ಬಿದ್ದ ಪರಿಣಾಮ ಸರಿಯಾಗಿ ಆಹಾರ ಸೇವಿಸದೇ ಆರೋಗ್ಯದಲ್ಲಿಯೇ ಏರುಪೇರು ಉಂಟಾಗಿತ್ತು. ಕಾಲಿಗೆ ಹುಳ ಬಿದ್ದ ಪರಿಣಾಮ ಸರಿಯಾಗಿ ಓಡಾಡಲು ಆಗದೇ ನರಳಾಡುತ್ತಿತ್ತು.
ಈ ವಿಷಯ ತಿಳಿದ ಅನಿಮಲ್ ಕೇರ್ ಟ್ರಸ್ಟ್ ನ ನಳಿನಾ ಡೆಸಾ, ನಗರಸಭೆ ಸದಸ್ಯ ರೂಬೆನ್ ಮೊಸೆಸ್, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಕಿರಣ್, ಶರತ್, ಸೇರಿ ಗೂಳಿಗೆ ಔಷಧಿ ಉಪಚಾರ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.