ಕಾಸರಗೋಡು: ಮಂಗಳವಾರ ರಾತ್ರಿ ಉಪ್ಪಳದಲ್ಲಿ ನಡೆದ ಗುಂಡಿನ ಕಾಳಗಕ್ಕೆ ಸಂಬಂಧಪಟ್ಟ೦ತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಪ್ಪಳ ಮಣಿಮುಂಡದ ಕಾಲಿಯಾ ರಫೀಕ್ ( 48) ಮತ್ತು ಉಪ್ಪಳ ಹಿದಾಯತ್ ನಗರದ ಕಸಾಯಿ ಅಲಿ ಎಂದು ಗುರುತಿಸಲಾಗಿದೆ. ಕೊಲೆ ಯತ್ನ ಪ್ರಕರಣವನ್ನು ಇಬ್ಬರ ಮೇಲೆ ಹೂಡಲಾಗಿದೆ.
ಕಾಲಿಯಾ ರಫೀಕ್ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ನಲ್ವತ್ತಕ್ಕೂ ಅಧಿಕ ಪ್ರಕರಣದ ಆರೋಪಿಯಾಗಿದ್ದಾನೆ. ಈತನ ಮೇಲೆ ಗೂಂಡಾ ಕಾಯ್ದೆ ಹೂಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಉಪ್ಪಳದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮುತ್ತಲಿಬ್ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿ ಜೈಲಿ ನಿಂದ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಕಾಲಿಯಾ ರಫೀಕ್ ನನ್ನು ಮುಗಿಸಲು ವಿರೋಧಿಗಳು ಸಂಚು ನಡೆಸುತ್ತಿದ್ದು, ಇದರಿಂದ ಉಪ್ಪಳದಲ್ಲಿ ಮತ್ತೆ ಗೂಂಡಾ ತಂಡಗಳ ನಡುವೆ ಕಾಳಗಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಮನೆಗೆ ತೆರಳುತ್ತಿದ್ದ ಕಾಲಿಯಾ ರಫೀಕ್ ನ ಮೇಲೆ ತಂಡವು ಗುಂಡು ಹಾರಿಸಿದ್ದು, ಬಳಿಕ ಪರಸ್ಪರ ಗುಂಡಿನ ಕಾಳಗ ನಡೆದಿತ್ತು. ಎರಡು ಕಾರುಗಳಿಗೆ ಹಾನಿ ಉಂಟಾಗಿತ್ತು. ಈ ಘಟನೆಗೆ ಸಂಬಂಧಪಟ್ಟ೦ತೆ ಕಾಲಿಯಾ ರಫೀಕ್ ಮತ್ತು ಕಸಾಯಿ ಅಲಿಯನ್ನು ಬಂಧಿಸಿದ್ದಾರೆ