ಮಂಗಳೂರು: ದೂರದೂರಿನಿಂದ ಕೆಲಸ ಅರಸಿ ಸ್ನೇಹಿತನೊಂದಿಗೆ ನಗರಕ್ಕೆ ಬಂದಿದ್ದ ಕಾರ್ಮಿಕನೋರ್ವ ಇತ್ತ ಕೆಲಸನೂ ಇಲ್ಲದೆ ಅತ್ತ ಕರೆ ತಂದ ಸ್ನೇಹಿತನೂ ಇಲ್ಲದೆ ಕಂಗಾಲಾಗಿ ಮರವೇರಿ ಕೂತ ಘಟನೆ ಮಂಗಳೂರು ನಗರದಲ್ಲಿ ಸೋಮವಾರ ಅಪರಾಹ್ನ ಸಂಭವಿಸಿದೆ.

ನಗರದ ಕರಂಗಾಲ್ಪಾಡಿಯಲ್ಲಿ ಈ ಘಟನೆ ನಡೆದಿದ್ದು, ಬೃಹತ್ ಮರವೇರಿ ಕೂತವನನ್ನು ಕದ್ರಿನ ಪೊಲೀಸರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈತನನ್ನು ಬಾಗಲ ಕೋಟೆಯ ಭೀಮ(24) ವರ್ಷ ಎಂದು ಗುರುತಿಸಲಾಗಿದೆ.. ಭೀಮ ಕೆಲಸ ಅರಸಿಕೊಂಡು ಕೆಲ ದಿನಗಳ ಹಿಂದೆ ದೂರದ ಬಾಗಲಕೋಟೆಯಿಂದ ಮಂಗಳೂರು ನಗರಕ್ಕೆ ಸ್ನೇಹಿತನೊಂದಿಗೆ ಬಂದಿದ್ದ. ಆದ್ರೆ ಸರಿಯಾದ ಕೆಲಸ ಸಿಕ್ಕಿರಲಿಲ್ಲ.

ಇತ್ತ ಒಟ್ಟಿಗೆ ಇದ್ದ ಸ್ನೇಹಿತ ಕೂಡ ಏಕಾಏಕಿ ಕಣ್ಮರೆಯಾಗಿದ್ದ. ಇದರಿಂದ ಮನನೊಂದ ಭೀಮ ಕಂಗಾಲಾಗಿ ನಗರದ ಕರಂಗಾಲ್ಪಾಡಿಯ ಬೃಹತ್ ಅಶ್ವಥ ಮರವನ್ನೇರಿ ಕೂತಿದ್ದ. ಸೂಮಾರು ಒಂದೂವರೆ ತಾಸು ಮರದಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಕದ್ರಿ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ ಮರದಲ್ಲಿ ಅಚಲವಾಗಿ ಕೂತಿದ್ದ ಭೀಮನನ್ನು ಕೊನೆಗೂ ಮನವೊಲಿಸಿ ಕೆಳಕ್ಕೆ ಇಳಿಸಲು ಸಫಲರಾಗಿದ್ದಾರೆ, ಪ್ರಸ್ತುತ ಭೀಮನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆತಂದರು.