ಮಂಗಳೂರು: ನಗರದಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದೆ. ಆದರೂ ಗುಡ್ಡ ಕುಸಿತ ಮುಂದುವರಿದಿದೆ. ಬಜಾಲ್ ಪಲ್ಲಕೆರೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ನೆಲವನ್ನು ಸಮತಟ್ಟುಗೊಳಿಸಲು ಕಟ್ಟಿದ್ದ ತಡೆಗೋಡೆ ಕುಸಿದು, ಮನೆಯೊಂದು ಭಾನುವಾರ ಹಾನಿಗೊಳಗಾಗಿದೆ.
‘ನಮ್ಮ ಮನೆ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ಮಗು ಸೇರಿದಂತೆ ಮೂವರು ವಾಸವಿದ್ದರು. ಭಾನುವಾರ ಮಧ್ಯಾಹ್ನ ತಡೆಗೋಡೆ ಕುಸಿಯುತದ್ದಂತೆಯೇ, ಸದ್ದು ಕೇಳಿ ಅವರು ಹೊರಗೆ ಓಡಿ ಬಂದಿದ್ದರಿಂದ ಪ್ರಾಣಹಾನಿ ತಪ್ಪಿತು. ಮಲಗುವ ಕೋಣೆ ಹಾಗೂ ಸ್ನಾನದ ಕೋಣೆ ಸಂಪೂರ್ಣ ನೆಲಕಚ್ಚಿದೆ’ ಎಂದು ಮನೆಯ ಮಾಲೀಕರ ರಾಧಾಕೃಷ್ಣ ತಿಳಿಸಿದರು.
ಸದ್ಯಕ್ಕೆ ತಡೆಗೋಡೆಯು ಭಾಗಶಃ ಬಿದ್ದಿದೆ. ಹಾನಿಗೆ ಒಳಗಾಗಿರುವ ಮನೆಯ ಪಕ್ಕದಲ್ಲಿ ನಮ್ಮ ಮನೆ ಇದೆ. ಇನ್ನಷ್ಟು ಮಳೆಯಾದರೆ, ನಮ್ಮ ಮನೆಗೂ ಹಾನಿ ಆಗಲಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ನಮ್ಮ ಕುಟುಂಬ ಹಾಗೂ ನಮ್ಮ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಕುಟುಂಬದವರು ಸಮೀಪದ ಮಹದೇವ ಭಜನಾ ಮಂದಿರದ ಸಮೀಪದ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿದ್ದೇವೆ” ಎಂದು ಅವರು ತಿಳಿಸಿದರು.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮೂರು ವರ್ಷಗಳಿಂದ ಬಡಾವಣೆ ನಿರ್ಮಾಣಕ್ಕಾಗಿ ಇಲ್ಲಿ ನೆಲವನ್ನು ಸಮತಟ್ಟು ಮಾಡುತ್ತಿದ್ದಾರೆ. ಇದಕ್ಕಾಗಿ ವರ್ಷದ ಹಿಂದೆಯೇ ತಡೆಗೋಡೆ ನಿರ್ಮಿಸಿದ್ದರು. ಅದಕ್ಕೆ ಸೂಕ್ತ ತಳಪಾಯವನ್ನು ಕಟ್ಟಿಲ್ಲ. ಈ ವರ್ಷದ ಅದರ ಮೇಳೆ ಮತ್ತೆ ಮೂರು ಸಾಲು ಕೆಂಪುಕಲ್ಲಿನ ಇಟ್ಟಿಗೆ ಕಟ್ಟಿದ್ದಾರೆ. ಈ ಸಲದ ಮಳೆಯಲ್ಲಿ ಇಟ್ಟಿಗೆಯ ಭಾರಕ್ಕೆ ತಡೆಗೋಡೆಯೇ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದರು.
‘ಈ ಬಡಾವಣೆ ನಿರ್ಮಾಣದಿಂದ ಸಮಸ್ಯೆ ಆಗುತ್ತಿರುವುದು ಇದು ಮೊದಲೇನಲ್ಲ. ಈ ಬಡಾವಣೆಯಿಂದ ಮಳೆ ನೀರು ಹರಿವಿಗೆ ಸೂಕ್ತ ವ್ಯವಸ್ಥೆ ಇಲ್ಲ. ಆರೇಳು ತಿಂಗಳ ಹಿಂದೆ ಮಳೆಯಾದಾಗ ನೆಲ ಸಮತಟ್ಟು ಮಾಡಿದ್ದ ಪ್ರದೇಶದ ಮಣ್ಣು ಹಾಗೂ ಕೆಸರು ಹರಿದು ಬಂತು ಇಲ್ಲಿನ ಮನೆಗಳ ಒಳಗೆ ಹಾಗೂ ಅಂಗಳದಲ್ಲಿ ನಿಂತಿತ್ತು. ಬಡಾವಣೆಯ ಮಣ್ಣು ಸಾಗಿಸುವಾಗಲೂ ಇಲ್ಲಿನ ರಸ್ತೆಗಳೆಲ್ಲವೂ ಕೆಸರುಮಯವಾಗುತ್ತವೆ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಈ ಹಿಂದೆಯ ದೂರು ನೀಡಿದ್ದರೂ ಕ್ರಮವಾಗಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.
ಪಾಲಿಕೆಯ ಪಂಜಿಮೊಗರು ವಾರ್ಡ್ನ ವಿದ್ಯಾನಗರ ಕಳಗುಡ್ಡೆಯ ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿತ ಉಂಟಾಗುವ ಅಪಾಯ ಎದುರಾಗಿದೆ. ಇಲ್ಲಿ ವಾಸವಿದ್ದ ಮೇರಿ ವರ್ಗೀಸ್, ಗೌರಿ ಭಾಸ್ಕರ್ಶಿವ ನಾಯ್ಕ ಹಾಗೂ ಚಂದ್ರ ನಾಯಕ್ ಕುಟುಂಬಗಳನ್ನು ಸಮೀಪದ ಪಂಜಿಮೊಗರು ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಆರಂಭಿಸಲಾದ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟು 19 ಮಂದಿ ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.