ಶಿವಮೊಗ್ಗ: ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಂದ ಶೌಚಗೃಹ ಸ್ವಚ್ಛಗೊಳಿಸಿದ ವಿಚಾರ ಭಾರಿ ಸದ್ದುಮಾಡಿತ್ತು. ಅಲ್ಲದೆ ಶಿಕ್ಷಕಿ ಬಂಧನವೂ ಆಗಿತ್ತು. ಇದೀಗ ಈ ನಿಟ್ಟಿನಲ್ಲಿ ನಿಯಮವೊಂದನ್ನು ಹೊರತರಲು ಮುಂದಾಗಿದೆ. ಶಾಲೆಗಳಲ್ಲಿ ಇನ್ಮುಂದೆ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ. ಮುಂದಿನ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಯೊಂದಿಗೆ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ಮಕ್ಕಳ ಕೈಯಲ್ಲಿ ಶೌಚ ಸ್ವಚ್ಚತೆ ಮಾಡಿಸುವಂತಿಲ್ಲ. ಹಾಗೆ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಲ್ಲದೇ ಇನ್ಮುಂದೆ ಶಾಲಾ ಸ್ವಚ್ಚತೆಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ. ಇನ್ನು ಎಲ್ಲಾ ಶಾಲೆಯಲ್ಲೂ ಮುಂದಿನ ವರ್ಷದಿಂದ ಮಕ್ಕಳು ನೆಲದ ಮೇಲೆ ಕೂಳಿತು ಪಾಠ ಕೇಳುವಂತಿಲ್ಲ. 1 ರಿಂದ 10ನೇ ತರಗತಿ ವರೆಗೆ ಮಕ್ಕಳು ತರಗತಿಗಳಲ್ಲಿ ಬೆಂಚ್ ಮೇಲೆಯೇ ಕುಳಿತು ಪಾಠ ಕೇಳಬೇಕು. ಶಿಕ್ಷಣ ಇಲಾಖೆಯ ಆದೇಶ ಹೊರಡಿಸಿದೆ ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದರು.
ಶಾಲಾ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಬಾರದು. ಮಕ್ಕಳಿಂದ ಕ್ಲೀನ್ ಮಾಡಿಸುವುದು ತಪ್ಪು. ಹಾಗೇನಾದರೂ ಮಾಡಿದ್ರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ. ಸ್ವಚ್ಛತೆಗೆಂದೇ ಡಿ ಗ್ರುಪ್ ನೌಕರರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ಸಿಬ್ಬಂದಿ ನೇಮಕಕ್ಕೆ ಸಿಎಂ ಜೊತೆ ಚರ್ಚಿಸಿ, ತೀರ್ಮಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.