ಶಿವಮೊಗ್ಗ: ಯುವಕರಲ್ಲಿ ಯೋಗವನ್ನ ಪ್ರಚುರ ಪಡಿಸುವ ನಿಟ್ಟಿನಲ್ಲಿ ಹಾಗೂ ಗಿನ್ನಿಸ್ ದಾಖಲೆ ನಿರ್ಮಾಣಕ್ಕಾಗಿ ನಡೆದ ಯೋಗಾ ಮ್ಯಾರಥಾನ್ ನಲ್ಲಿ ನಿರೀಕ್ಷೆಗೂ ಮೀರಿದ ಜನ ಭಾಗವಹಿಸಿ ಗಿನ್ನಿಸ್ ದಾಖಲೆ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಯೋಗಥಾನ್-2023′ ಕಾರ್ಯಕ್ರಮವನ್ನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ. ಇಲಾಖೆ, ಆಯುಷ್ ಇಲಾಖೆ, ಆಯುಷ್ ಟಿ.ವಿ ಇವರ ಸಹಯೋಗದಲ್ಲಿ ಸಂಘಟಿಸಲಾಗಿತ್ತು.
ಇಂದು ರಾಜ್ಯದ 35 ಕೇಂದ್ರಗಳಲ್ಲಿ ಏಕಕಾಲದಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸಿ ದಾಖಲೆಯ ಯೋಗಾಭ್ಯಾಸ ಮಾಡುವ ಯೋಜನೆಯಾಗಿತ್ತು. ನಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಸುಮಾರು 10000 ಯೋಗಾಸಕ್ತರಿಂದ ಹಾಗೂ ಯುವಜನರಿಂದ ಯೋಗ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ವೈಯಕ್ತಿಕ ಅಥವಾ ಸಾಂಸ್ಥಿಕವಾಗಿ ನೊಂದಾಣಿ ಮೂಲಕ ಭಾಗಿಯಾಗಿದ್ದರು. ಕಾರ್ಯಕ್ರಮವನ್ನ ಉದ್ಘಾಟಿಸಿದ ಸಂಸದ ಬಿ.ವೈ ರಾಘವೇಂದ್ರ ಇಂದು ಮಕರ ಸಂಕ್ರಮಣದ ದಿನವಾಗಿದ್ದು ಸೂರ್ಯನ ಪಥ ಬದಲಿಸಿ ಮುಂದಿನ 6 ತಿಂಗಳು ಹೆಚ್ಚು ಬೆಳಕು ಮೂಡುವಂತೆ ಆಗಲಿದೆ. ಅದರಂತೆ ಎಲ್ಲರ ಜೀವನದಲ್ಲಿ ಬೆಳಕು ಮೂಡಲಿ ಎಂದು ಆಶಿಸಿದರು.
ಸಧೃಢ ದೇಹಕ್ಕೆ ಉತ್ತಮ ಆರೋಗ್ಯ ಅವಶ್ಯಕ, ಉತ್ತಮ ಆರೋಗ್ಯವಿದ್ದರೆ ಸಾಧನೆ ಸಾಧ್ಯವಾಗುತ್ತದೆ. ಯಾವುದೇ ಯಶಸ್ವಿಗೆ ಶಾರ್ಟ್ ಕಟ್ ಇಲ್ಲ. ಶ್ರಮ ಅನಿವಾರ್ಯ. ಆತ್ಮ ವಿಶ್ವಾಸವನ್ನ ಬೆಳೆಸಿಕೊಂಡು ಮುಙದ ಸಾಗಿದ್ದಲ್ಲಿ ಎಂತಹ ಯಶಸ್ಸನ್ನೂ ಕಾಣಬಹುದು ಎಂದು ಕರೆ ನೀಡಿದರು.
ಯೋಗಾಥಾನ್ ನಲ್ಲಿ ಬಿಜೆಪಿ ಮುಖಂಡ ಎಸ್ ಎಸ್ ಜ್ಯೋತಿ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್, ಎಡಿಸಿ ಡಾ.ನಾಗೇಂದ್ರ ಹೊನ್ನಳ್ಳಿ, ಜಿಪಂ ಸಿಇಒ ಪ್ರಕಾಶ್ ಭಾಗಿಯಾಗಿದ್ದರು. ಚುಮುಚುಮು ಚಳಿಯಲ್ಲಿ ಎಲ್ಲರೂ ಯೋಗಾಸನ ಮಾಡಿರುವುದು ವಿಶೇಷವಾಗಿತ್ತು. ಕಾರ್ಯಕ್ರಮದ ನಂತರ ಸಂಸದರಿಂದ ಎಳ್ಳು ಬೆಲ್ಲವನ್ನ ಹಂಚಲಾಯಿತು. ಭಾಗವಹಿಸಿದ್ದ ಎಲ್ಲರಿಗೂ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.