ಶಿವಮೊಗ್ಗ: ರೈಲು ಹಳಿ ದಾಟುವಾಗ ಅಂಧ ಯುವಕನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.
ನಿನ್ನೆ ಮಧ್ಯಾಹ್ನ 1 ಗಂಟೆಯ ಶಿವಮೊಗ್ಗ-ಬೆಂಗಳೂರು ಡೆಮೋ ರೈಲು ಮಧ್ಯಾಹ್ನ 1-30 ಕ್ಕೆ ಭದ್ರಾವತಿಯ ಹುತ್ತಾ ಕಾಲೋನಿಯ ಬಳಿ ಚಲಿಸುವಾಗ ಹಳಿ ದಾಟುತ್ತಿದ್ದ 34 ವರ್ಷದ ಯುವಕನ ಮೇಲೆ ಹರಿದು ಹೋಗಿದೆ.
ರೈಲಿಗೆ ಸಿಲುಕಿ ಸಾವನ್ನಪ್ಪಿದ ಯುವಕನನ್ನ ಮಹೇಶ್ ಎಂದು ಗುರುತಿಸಲಾಗಿದೆ. ಮಹೇಶ್ ಗೆ ಕಣ್ಣು ಕಾಣಿಸುತ್ತಿರಲಿಲ್ಲ. ಕಿವಿ ಸಹ ಮಂದವಾಗಿತ್ತು ಎಂದು ಹೇಳಲಾಗುತ್ತಿದೆ. ಈತ ಉಜ್ಜೈನಿಪುರದ 8 ನೇ ತಿರುವಿನ ನಿವಾಸಿಯಾಗಿದ್ದಾನೆ. ಈತ ಯಾಕೆ ಇಲ್ಲಿಗೆ ಬಂದಿದ್ದ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ರೈಲು ಬರುವುದು ಕಾಣಿಸದೆ, ಶಬ್ದವೂ ಕೇಳಿಸದೆ ಇದ್ದುದ್ದರಿಂದ ಮಹೇಶ್ ದುರಂತ ಸಾವಿಗೆ ಸಾಕ್ಷಿಯಾಗಿದ್ದಾನೆ. ಆತ ಯಾರ ಸಹಾಯವಿಲ್ಲದೆ ಯಾಕೆ ಬಂದ ಎಂಬುದು ತಿಳಿದುಬಂದಿಲ್ಲ. ಆತನ ಕುಟುಂಬಕ್ಕೆ ಮೃತ ದೇಹವನ್ನ ಹಸ್ತಾಂತರಿಸಲಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.