ಮೂಡಿಗೆರೆ: ಕಾಫಿನಾಡಿನ ಚಾರ್ಮಾಡಿ ಘಾಟಿಯಲ್ಲಿ ನಿಂತರೇ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸುತ್ತದೆ. ಇಲ್ಲಿನ ಸೌಂದರ್ಯ ಕಂಡು ಪ್ರವಾಸಿಗರು, ದಾರಿಹೋಕರು ನಿಂತಲ್ಲೇ ಕರಗಿ ನೀರಾಗುತ್ತಿದ್ದಾರೆ.
ಚಾರ್ಮಾಡಿ ಒಡಲ ದಟ್ಟ ಕಾನನದೊಳಗಿನ ಮಂಜಿನ ಕಣ್ಣಾಮುಚ್ಚಾಲೆ ಆಟ ಕಂಡು ನೋಡುಗರ ಮೂಕವಿಸ್ಮಿತರಾಗುತ್ತಿದ್ದಾರೆ. ಆದರೆ ಪ್ರಕೃತಿಯ ಈ ಸೌಂದರ್ಯವೇ ನೋಡುಗರನ್ನು ಬಲಿ ಪಡೆಯುತ್ತಾ ಎಂಬ ಆತಂಕ ಎದುರಾಗಿದೆ. ಯಾಕಂದ್ರೆ, ಈ ಮಾರ್ಗದಲ್ಲಿ ಸಂಚರಿಸೋ ಪ್ರವಾಸಿಗರು ಬಂಡೆ ಮೇಲೆ ಹತ್ತಿ ಹುಚ್ಚಾಟ ಆಡುತ್ತಿರುವುದು ಮತ್ತೊಂದು ಅನಾಹುತಕ್ಕೆ ದಾರಿಯಾಗುವ ಸಾಧ್ಯತೆ ಇದೆ.
ಹೌದು ಚಾರ್ಮಾಡಿ ಘಾಟಿಯಲ್ಲಿ ಸಾಗುವ ಪ್ರವಾಸಿಗರ ಪುಂಡಾಟವೂ ಹೆಚ್ಚುತ್ತಿದೆ. ಇಲ್ಲಿನ ಸೌಂದರ್ಯವನ್ನು ಆಸ್ವಾದಿಸುವ ನೆಪದಲ್ಲಿ ಇತರ ವಾಹನ ಸವಾರರಿಗೆ ತೊಂದರೆ, ಟ್ರಾಫಿಕ್ ಜಾಮ್, ಅಪಾಯದ ಬಂಡೆ ಮೇಲೆ ಹತ್ತಿ ಹುಚ್ಚಾಟ ಮೆರೆಯುತ್ತಿದ್ದಾರೆ.
ಚಿಕ್ಕ ಮಕ್ಕಳನ್ನೂ ಬಂಡೆ ಮೇಲೆ ಹತ್ತಿಸುತ್ತಿರುವ ಪೋಷಕರು:
ಇನ್ನು ಚಿಕ್ಕ ಮಕ್ಕಳನ್ನೂ ಬಂಡೆ ಮೇಲೆ ಹತ್ತಿಸಿ ಹುಚ್ಚಾಟ ಮೆರೆಯುತ್ತಿ ದ್ದಾರೆ ಪೋಷಕರು ಇದರಿಂದಾಗಿ ಸ್ವಲ್ಪ ಜಾರಿದರೂ ದೊಡ್ಡ ಮಟ್ಟದ ಅಪಾಯ ಸಂಭವಿಸೋದು ಅಂತೂ ಗ್ಯಾರಂಟಿ, ಆದರೂ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ಕ್ರೇಜಿಗೆ ಬಿದ್ದಿದ್ದಾರೆ.
ಬಂಡೆಯ ಮೇಲೆ ಹತ್ತಿ ಕೈ-ಕಾಲು ಮುರಿದುಕೊಂಡ ಪ್ರಕರಣ ಹೆಚ್ಚಳ:
ಚಾರ್ಮಾಡಿ ಘಾಟಿಯಲ್ಲಿ ರಸ್ತೆಯುದ್ಧಕ್ಕೂ ಜಲಪಾತಗಳಿವೆ. ಅಲ್ಲಿನ ಕಲ್ಲು ಬಂಡೆಗಳ ಮೇಲೆ ನಿರಂತರವಾಗಿ ನೀರು ಬಿದ್ದು ಕಲ್ಲಿನ ಮೇಲೆ ಪಾಚಿ ಬೆಳೆದು ಸಿಕ್ಕಾಪಟ್ಟೆ ಜಾರುತ್ತದೆ. ಅಲ್ಲಿಂದ ಬಿದ್ದರೆ ಕೈ-ಕಾಲು ಮುರಿದು ಹೋಗುವುದರಲ್ಲಿ ಅನುಮಾನವಿಲ್ಲ. ಆದರೆ, ಕೆಲ ಹುಚ್ಚು ಪ್ರವಾಸಿಗರು ಅಂತಹಾ ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು-ಮಸ್ತಿ ಮಾಡುತಿದ್ದಾರೆ. ಈ ಹಿಂದೆ ಕೂಡ ಜಲಪಾತಗಳ ಮೇಲೆ ಹತ್ತಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡವರಿದ್ದಾರೆ. ಕೆಲವರದ್ದು ಪ್ರಾಣವೂ ಹೋಗಿದೆ. ಆದರೂ, ಪ್ರವಾಸಿಗರು ಈ ಹುಚ್ಚಾಟ ಬಿಟ್ಟಿಲ್ಲ.
ಪ್ರವಾಸಿಗರ ಹುಚ್ಚಾಟದಿಂದ ರೋಗಿಗಳ ಪರದಾಟ:
ಪ್ರಕೃತಿ ಸೌಂದರ್ಯವನ್ನು ಸವಿಯುವ ನಿಟ್ಟಿನಲ್ಲಿ ಪ್ರವಾಸಿಗರು ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮುಗಿಬಿದ್ದಿದ್ದಾರೆ. ಇದರಿಂದ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ತುರ್ತು ಕೆಲಸದ ನಿಮಿತ್ತ ತೆರಳುವ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಿ ಅಂಬುಲೆನ್ಸ್ ಗೂ ದಾರಿ ಬಿಡದಂತೆ ಪಾರ್ಕಿಂಗ್ ಮಾಡಿರುವುದು ಪ್ರವಾಸಿಗರ ಹುಚ್ಚಾಟದಿಂದ ರೋಗಿಗಳ ಪರದಾಡುವ ಸ್ಥಿತಿ ಎದುರಾಗಿದೆ.
ಪೊಲೀಸ್ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ, ಬೀಟ್ ಹಾಕುವಂತೆ ಮನವಿ:
ಒಟ್ಟಾರೆಯಾಗಿ ಜಾರುವ ಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮರೆಯುವುದು, ರಸ್ತೆ ಮದ್ಯೆ ಡ್ಯಾನ್ಸ್, ಟ್ರಾಫಿಕ್ ಜಾಮ್ ಈ ತರ ಪ್ರವಾಸಿಗರ ಹುಚ್ಚಾಟದಿಂದ ಘಾಟ್ನಲ್ಲಿ ಓಡಾಡುವ ಪ್ರವಾಸಿಗರಿಗೆ ತೀರ ತೊಂದರೆಯಾಗಿದೆ. ಈ ಹಿನ್ನೆಲೆ ಪೊಲೀಸರು ಸೂಕ್ತ ಕ್ರಮ ಕೈಕೊಂಡು ಬೀಟ್ ಹಾಕುವಂತೆ ಮನವಿ ಮಾಡಿದ್ದಾರೆ.