ಶಿವಮೊಗ್ಗ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಬೇಸಗೆ ಬಿಸಲಿನ ಜೊತೆ ದಿನದಿನಕ್ಕೆ ಚುನಾವಣೆ ಕಾವು ಏರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕಲ್ಯಾಣ ಕರ್ನಾಟಕ ಅದರಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭದ್ರಕೋಟೆ ಕಲಬುರಗಿಯಿಂದಲೇ ರಣಕಹಳೆ ಮೊಳಗಿಸಿದ್ದಾರೆ ಆ ಮೂಲಕ ಕರ್ನಾಟಕ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದ್ದಾರೆ. ಬಿಸಲುನಾಡು ಕಲಬುರಗಿ ರೋಡ್ಶೋ ಬಳಿಕ ಇದೀಗ ಪ್ರಧಾನಿ ಮೋದಿ ಮಲೆನಾಡಿನಲ್ಲೂ ಮೋದಿ ಅಲೆ ಎಬ್ಬಿಸಲು ಆಗಮಿಸುತ್ತಿದ್ದಾರೆ.
ಹೌದು, ಈ ಬಾರಿ ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿ ಕಲಬುರಗಿ, ಶಿವಮೊಗ್ಗದಿಂದಲೇ ಪ್ರಚಾರ ಶುರುಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲ್ಬುರ್ಗಿ ಖರ್ಗೆಯವರ ಭದ್ರಕೋಟೆಯಾಗಿದ್ದು, ಇಲ್ಲಿ ಪರಿಶಿಷ್ಟವರ್ಗದ ಮತದಾರರೇ ಹೆಚ್ಚಾಗಿದ್ದಾರೆ. ಈ ಬಾರಿ ಪರಿಶಿಷ್ಟ ವರ್ಗಗಳ ಮನಗೆದ್ದು, ಕಲಬುರಗಿಯಲ್ಲಿ ಕಮಲ ಅರಳಿಸುವ ಮೂಲಕ ಖರ್ಗೆ ಕುಟುಂಬಕ್ಕೆ ನೆಲೆ ಇಲ್ಲದಂತೆ ಮಾಡುವುದು ಕಲಬುರಗಿಯಲ್ಲಿ ಮೊದಲ ಸಮಾವೇಶ ನಡೆಸಿರುವುದರ ಉದ್ದೇಶವಾಗಿದೆ. ಇದೀಗ ಮಲೆನಾಡಿನಲ್ಲೂ ಪ್ರಧಾನಿ ಮೋದಿ ಗರ್ಜಿಸಲಿದ್ದಾರೆ. ಶಿವಮೊಗ್ಗ ಹೇಳಿಕೇಳಿ ಲಿಂಗಾಯತ ಸಮುದಾಯ ಹೆಚ್ಚಾಗಿರುವ ಕ್ಷೇತ್ರವಾಗಿದೆ ಅದರಲ್ಲೂ ಕರ್ನಾಟಕದಲ್ಲಿ ಕಮಲ ಅರಳಿಸಿದ ಬಿಎಸ್ ಯಡಿಯೂರಪ್ಪನವರ ಕ್ಷೇತ್ರವಾಗಿದ್ದು, ಈ ಹಿನ್ನೆಲೆ ಶಿವಮೊಗ್ಗದಿಂದ ಚುನಾವಣಾ ಪ್ರಚಾರದ ಜೊತೆಗೆ ಈ ಸಮಾರಂಭದಲ್ಲಿ ಬಿಎಸ್ವೈರಿಗೆ ಗೌರವ ಸನ್ಮಾನ ಮಾಡಲಿದ್ದಾರೆ.
ಮಲೆನಾಡಿಗೆ ಪ್ರಧಾನಿ ಆಗಮಿಸುವ ಕುರಿತಂತೆ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಮಾತನಾಡಿದ್ದು, ನಾಳೆ(ಮಾ.18) ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎರಡೂವರೆ ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದಿದ್ದಾರೆ.
ನಮ್ಮ ಸಂಕಲ್ಪ ವಿಕಸಿತ ಭಾರತ ಎಂದ ಅವರು, ನಮ್ಮ ಗುರಿ ಈ ಚುನಾವಣೆಯಲ್ಲಿ 400 ಸೀಟು ಪಡೆಯುವುದಾಗಿದೆ. ಯಡಿಯೂರಪ್ಪ, ವಿಜಯೇಂದ್ರ,ಈಶ್ವರಪ್ಪ ,ಆರಗ ಜ್ಞಾನೇಂದ್ರ ಸೇರಿದಂತೆ ನಾಲ್ಕು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ನಾಳೆ ಕಾರ್ಯಕ್ರಮದಲ್ಲಿರ್ತಾರೆ. ಮಂಗಳೂರು ಅಭ್ಯರ್ಥಿ ಕೂಡ ವೇದಿಕೆ ಮೇಲೆ ಇರುತ್ತಾರೆ ಎಂದರು