ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಗುಂಜನೂರು ಗ್ರಾಮದಲ್ಲಿ. ಇಲ್ಲಿನ ನಿವಾಸಿ, 28 ವರ್ಷದ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೇ ಗ್ರಾಮದ ವೀರೇಂದ್ರ ಎಂಬಾತನ ವಿರುದ್ಧ ಆರೋಪ ಕೇಳಿ ಬಂದಿದೆ. ಈತನೇ ಈ ಮಹಿಳೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಈ ವೀರೇಂದ್ರ ಹಾಗೂ ಮಹಿಳೆ ಇಬ್ಬರೂ ಸಂಬಂಧಿಕರಾಗಿದ್ದರು. ಆಕೆ ವಿವಾಹಿತೆಯಾಗಿದ್ದರೂ ಆಕೆ ಮೇಲೆ ವೀರೇಂದ್ರ ಕಣ್ಣು ಹಾಕಿದ್ದ ಎನ್ನಲಾಗಿದೆ. ಆತ ಪತಿಯ ದೂರದ ಸಂಬಂಧಿಯಾಗಿದ್ದ. ಪರಿಚಯ ಮಾಡಿಕೊಂಡ ನಂತರ ವೀರೇಂದ್ರನ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು. ಮಹಿಳೆಯ ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಹಾಗೂ ಮಾನಹಾನಿ ಮಾತುಗಳನ್ನು ಆಡತೊಡಗಿದ್ದ.
ಮಹಿಳೆಯನ್ನು ಒಲಿಸಿಕೊಳ್ಳಲು ಆರೋಪಿ ವೀರೇಂದ್ರ ನಾನಾ ಕಸರತ್ತು ಮಾಡಿದ್ದಾನೆ. ಆಕೆ ಒಪ್ಪದಿದ್ದಾಗ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ‘ನಿನ್ನ ಅಶ್ಲೀಲ ಫೋಟೋ, ವೀಡಿಯೋಗಳು ನನ್ನ ಬಳಿ ಇವೆ. ನಾವಿಬ್ಬರೂ ಖಾಸಗಿಯಾಗಿ ಕಳೆದ ಕ್ಷಣಗಳ ಫೋಟೋಗಳಿವೆ’ ಎಂದು ಸುಳ್ಳು ಹೇಳಿ ಆಕೆಗೆ ಹೆದರಿಸಿದ್ದಾನೆ. ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ವಿರೇಂದ್ರ, ಇತ್ತೀಚೆಗೆ ಆ ಮಹಿಳೆಯ ಮನೆಗೆ ಹೋಗಿದ್ದ. ಆಕೆಯ ಗಂಡನ ಎದುರೇ ನಿನ್ನ ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಿಕೊಡು’ ಎಂದು ವೀರೇಂದ್ರ ರಂಪಾಟ ಮಾಡಿದ್ದ. ಇದು ದೊಡ್ಡ ಸುದ್ದಿಯಾಗಿ ಗ್ರಾಮದ ಹಿರಿಯರು ದೇವಸ್ಥಾನದಲ್ಲಿ ಪಂಚಾಯಿತಿ ನಡೆಸಿ ವೀರೇಂದ್ರನಿಗೆ ಬುದ್ಧಿವಾದ ಹೇಳಿದ್ದರು.
ಇಷ್ಟೆಲ್ಲಾ ರಾದ್ಧಾಂತದ ಬಳಿಕ ಮನನೊಂದ ಮಹಿಳೆ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊಡಲೇ ಆಕೆಗೆ ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ.