ಶಿವಮೊಗ್ಗ : ಹೊಸನಗರ ತಾಲೂಕು ಬಿದರಹಳ್ಳಿಯಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಮಹಿಳೆಯೊಬ್ಬರು ತನ್ನ 4 ವರ್ಷದ ಮಗಳ ಜತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ದಿನಗಳ ಹಿಂದಷ್ಟೇ ಪಕ್ಕದ ಮನೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ಸಾವಿಂದ ಭಯಗೊಂಡಿದ್ದ ಮಹಿಳೆ ಇದೀಗ ದುರಂತ ಅಂತ್ಯ ಕಂಡಿದ್ದಾರೆ.
ಬಿದರಹಳ್ಳಿಯ ಚಿಟ್ಟಗದ್ದೆ ವಿದ್ಯಾ(32) ಮತ್ತು ಇವರ ಪುತ್ರಿ ತನ್ವಿ(4) ಮೃತ ದುರ್ದೈವಿಗಳು. ಶಿಕಾರಿಪುರ ತಾಲೂಕು ಮುಡುಬ ಸಿದ್ಧಾಪುರದ ವಿದ್ಯಾಗೆ 2014ರಲ್ಲಿ ಚಿಟ್ಟೆಮನೆಯ ಲೋಹಿತ್ರೊಂದಿಗೆ ಮದುವೆ ಆಗಿತ್ತು. ದಂಪತಿಗೆ ಇಬ್ಬರು ಪುತ್ರಿಯರಿದ್ದರು. ಮೂಲತಃ ಕೃಷಿಕರಾದ ಲೋಹಿತ್ನ ಕುಟುಂಬ ತಂದೆ-ತಾಯಿ ಜತೆ ಚಿಟ್ಟೆಮನೆಯಲ್ಲೇ ವಾಸವಾಗಿತ್ತು. 10 ದಿನಗಳ ಹಿಂದೆ ಹೊಸನಗರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿದ್ಯಾರ್ಥಿನಿಯ ಅಂತ್ಯಕ್ರಿಯೆ ಚಿಟ್ಟೆಗದ್ದೆಯಲ್ಲಿ ನೆರವೇರಿತ್ತು. ಅಂತ್ಯಕ್ರಿಯೆಯಲ್ಲಿ ವಿದ್ಯಾ ಭಾಗವಹಿಸಿದ್ದರು. ಅಂದಿನಿಂದ ಮಾನಸಿಕ ಖಿನ್ನತೆಗೆ ಜಾರಿದ್ದ ವಿದ್ಯಾ, ಘಟನೆ ಬಳಿಕ ಸಂಜೆ 6ರ ನಂತರ ಮನೆಯಿಂದ ವಿದ್ಯಾ ಹೊರಬರಲು ಹೆದರುತ್ತಿದ್ದರು ಎನ್ನಲಾಗಿದೆ.
ಖಿನ್ನತೆಯಿಂದ ಬಳಲುತ್ತಿದ್ದ ವಿದ್ಯಾ ಅವರನ್ನು ಪತಿ ಲೋಹಿತ್ ನಿನ್ನೆಯಷ್ಟೇ(ಬುಧವಾರ) ರಿಪ್ಪನ್ಪೇಟೆ ಸಮೀಪದ ಹುಂಚದಕಟ್ಟೆಯಲ್ಲಿ ಖಾಸಗಿ ಕ್ಲಿನಿಕ್ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ವೈದ್ಯರ ಬಳಿ ಖಿನ್ನತೆ ಒಳಗಾಗಿರುವ ವಿಚಾರವನ್ನೂ ಪತಿ ಹೇಳಿದ್ದರು. ವೈದ್ಯರು ವಿದ್ಯಾಗೆ ಧೈರ್ಯ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ತಾಯಿ ವಿದ್ಯಾ ಮತ್ತು ತಂಗಿ ತನ್ವಿಯೊಂದಿಗೆ 6 ವರ್ಷದ ಮೊದಲ ಪುತ್ರಿಯೂ ಬುಧವಾರ ರಾತ್ರಿ ಮಲಗಿದ್ದಳು. ಗುರುವಾರ ಬೆಳಗಿನ ಜಾವ 3ರ ಸುಮಾರಿಗೆ ಅಮ್ಮ ಮತ್ತು ತಂಗಿ ಹಾಸಿಗೆ ಮೇಲೆ ಕಾಣದಿದ್ದಾಗ ಮಲಗಿದ್ದ ತಂದೆಯನ್ನ ಮೊದಲ ಪುತ್ರಿಯೇ ಎಬ್ಬಿಸಿದ್ದಳು. ಕೂಡಲೇ ಕುಟುಂಬಸ್ಥರು ಮನೆ ಹಾಗೂ ಸುತ್ತಮುತ್ತ ಹುಡುಕಾಡಿದರೂ ವಿದ್ಯಾ ಮತ್ತು ತನ್ವಿ ಪತ್ತೆಯಾಗಿರಲಿಲ್ಲ. ಮನೆ ಎದುರಿಗಿದ್ದ 50 ಅಡಿ ಆಳದ ಬಾವಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಭೀಷ್ಮಾಚಾರಿ ಅವರು ಮೃತದೇಹಗಳನ್ನು ಹೊರತೆಗೆದರು. ತಾಯಿ-ಮಗಳ ಸಾವಿಂದ ಇಡೀ ಕುಟುಂಬ ಕಂಗೆಟ್ಟಿದೆ. ಈ ಬಗ್ಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.