ಐಪಿಸಿ ಸೆಕ್ಷನ್ 153ಎ, 295ಎ, 504, 505(2), 34 ನ ಅಡಿಯಲ್ಲಿ ಎಫ್ಐಆರ್
ಹಿಂದೂ ಹರ್ಷನ ಕೊಲೆ ಪ್ರಕರಣದ ನಂತರ ಶಿವಮೊಗ್ಗ ನಗರದಲ್ಲಿ ನಡೆದ ಗಲಾಟೆಗೆ ಸಚಿವ ಕೆ.ಎಸ್.ಈಶ್ವರಪ್ಪರವರು ಹಾಗೂ ಪಾಲಿಕೆ ಸದಸ್ಯ ಚೆನ್ನಬಸಪ್ಪರವರು ನೀಡಿದ ಹೇಳಿಕೆ ಕಾರಣವಾಗಿದೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದರೂ ಸಹ ಜವಾಬ್ದಾರಿಗಳನ್ನ ನಿರ್ವಹಿಸದೇ ಗಲಭೆ ಸೃಷ್ಟಿಸುವಂತಹ ಹೇಳಿಕೆಗಳನ್ನ ನೀಡಿದ್ದರಿಂದಲೇ ಸೀಗೆಹಟ್ಟಿ, ರವಿವರ್ಮ ಬೀದಿ ಸೇರಿದಂತೆ ಹಲವು ಕಡೆಗಳಲ್ಲಿ ಕೋಮುಗಲಭೆ ಉಂಟಾಗಿದೆ ಎಂದು ಪೀಸ್ ಆರ್ಗನೈಸೇಷನ್ನ ಕಾರ್ಯದರ್ಶಿ ರಿಯಾಜ್ ಅಹಮದ್ ಆರೋಪಿಸಿದ್ದರು.
ಈ ಸಂಬಂಧ ದೂರು ಕೊಟ್ಟರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದ ದೂರುದಾರರು ಅಪರ ಮುಖ್ಯ ಮಹಾನಗರ ದಂಢಾಧಿಕಾರಿಗಳ ವಿಶೇಷ ನ್ಯಾಯಾಲಯ ಬೆಂಗಳೂರು, ಇಲ್ಲಿಗೆ ಮೊರೆಹೋಗಿದ್ದರು.
ಈ ಸಂಬಂಧ ಕೋರ್ಟ್ ನೀಡಿದ್ದ ಆದೇಶದನ್ವಯ, ಸಲ್ಲಿಸಿದ್ದ ಪಿಸಿಆರ್ ಸಂಬಂಧ ಇದೀಗ ದೊಡ್ಡಪೇಟೆ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 153ಎ, 295ಎ,504, 505(2),34 ನ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಎನ್ಕ್ವೈರಿ ಹೇಗೆ ನಡೆಯುತ್ತದೆ
ಸದ್ಯ ದಾಖಲಾಗಿರುವ ಪ್ರಕರಣ ಕೊರ್ಟ್ ಪಿಸಿಆರ್ನ ಅಡಿಯಲ್ಲಾದ್ದರಿಂದ, ಪ್ರಕರಣದಲ್ಲಿ ಯಾವುದೇ ರೀತಿಯ ಬಂಧನ ಪ್ರಕ್ರಿಯೆ ಇರುವುದಿಲ್ಲ. ಕೋರ್ಟ್ಗಗೆ ತನಿಖಾಧಿಕಾರಿ ವಿಸ್ತೃತ ವರದಿಯೊಂದನ್ನ ಸಲ್ಲಿಸುತ್ತಾರೆ. ಈ ವರದಿಯ ಅನ್ವಯ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆ ಸಂದರ್ಭದಲ್ಲಿ ಹಾಜರಾಗಬೇಕಾಗುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಹಾಗೂ ಚೆನ್ನಬಸಪ್ಪರವರು ನೀಡಿದ್ದ ಹೇಳಿಕೆಯ ರೆಕಾರ್ಡ್ ಮತ್ತು ನಂತರ ನಡೆದ ಘಟನೆಗಳು, ಹಿನ್ನೆಲೆ ಹಾಗೂ ಪ್ರಕರಣದಲ್ಲಿ ಸೆಕ್ಷನ್ ಉಲ್ಲಂಘನೆಯಾಗಿದ್ದಕ್ಕೆ ಸಾಕ್ಷ್ಯಗಳು ಸೇರಿದಂತೆ ಪೊಲೀಸ್ ಇಲಾಖೆ ನೇರವಾಗಿ ಕೋರ್ಟ್ಗೆ ರಿಪೋರ್ಟ್ ನೀಡಲಿದೆ.