ಶಿವಮೊಗ್ಗ, ಫೆ. 20 : ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಹೊನ್ನಾಳಿ ಶಾಸಕ ಎಂ. ರೇಣುಕಾಚಾರ್ಯ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.
ಸೋಮವಾರ ಎಂ. ಪಿ. ರೇಣುಕಾಚಾರ್ಯ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. “ಬಜರಂಗದಳದ ಯುವ ಕಾರ್ಯಕರ್ತ ಹರ್ಷರನ್ನು ಕಳೆದುಕೊಂಡಿರುವುದು ನನ್ನ ಮನೆಯ ಮಗನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ” ಎಂದು ಹೇಳಿದ್ದಾರೆ.
“ಹರ್ಷ ಕುಟುಂಬದ ಜೊತೆ ನಾನು ಸದಾ ಇರುತ್ತೇನೆ. ಈ ಸಂದರ್ಭದಲ್ಲಿ ಹರ್ಷ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ 2,00,000 ರೂ. ನೀಡುತ್ತಿದ್ದೇನೆ. ಹರ್ಷ ಕುಟುಂಬದ ಜೊತೆ ಸಮಸ್ತ ಹಿಂದೂ ಬಂಧುಗಳು ಇದ್ದೇವೆ” ಎಂದು ಹೇಳಿದ್ದಾರೆ.
“ಕೆಲವು ದುಷ್ಕರ್ಮಿಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದು, ಹಿಂದೂ ಯುವಕರ ಪ್ರತಿ ರಕ್ತದ ಕಣಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದೂ ಯುವಕರ ರಕ್ಷಣೆಗೆ ನಮ್ಮ ಬಿಜೆಪಿ ಸರ್ಕಾರ ಸದಾ ಬದ್ಧವಾಗಿರುತ್ತದೆ” ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಶಾಸಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹ ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದ್ದರು. ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.