ಕನ್ನೇರಿ ಸಿನಿಮಾ.. ಹಾಡುಗಳಿಂದಲೇ ಎಲ್ಲರನ್ನ ಮೋಡಿ ಮಾಡಿರುವ ಸಿನಿಮಾ. ಬರೀ ಮೋಡಿ ಅಂದ್ರೆ ತಪ್ಪಾಗುತ್ತೆ ಕಂಪ್ಲೀಟ್ ಆಗಿ ಭಾವನೆಗಳಿಂದಲೇ ಸೆಳೆದಿರುವ ಸಿನಿಮಾವಿದು. ಹಾಡಲ್ಲೇ ಇಷ್ಟು ಸ್ಟ್ರಾಂಗ್ ಆಗಿ ಹಿಡಿದಿಟ್ಟಿರುವ ಕನ್ನೇರಿ ಸಿನಿಮಾ ರಿಲೀಸ್ ಆದ್ಮೇಲೆ ಹೇಗೆಲ್ಲಾ ಸದ್ದು ಮಾಡುತ್ತೆ ಅನ್ನೋ ಅಂದಾಜು ಈಗಾಗಲೇ ಎಲ್ಲರ ಗಮನಕ್ಕೂ ಬಂದು ಹೋಗಿದೆ.
ಇದೀಗ ಕನ್ನೇರಿ ಸಿನಿಮಾದ ಟ್ರೇಲರ್ ಹೊರ ಬಂದಿದೆ. ಜನಪ್ರಿಯ ನಟಿ ತಾರಾ ಅನುರಾಧ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಟ್ರೇಲರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿ ಇಡೀ ತಂಡಕ್ಕೆ ತಮ್ಮ ಶುಭಕಾಮನೆ ತಿಳಿಸಿದ್ದಾರೆ. ಈ ಹಿಂದೆ ಬಿಡುಗಡೆಯಾದ ಹಾಡುಗಳಲ್ಲಿ ಭಾವನೆಗಳ ತೊಳಲಾಟವಿತ್ತೋ, ಇದೀಗ ಟ್ರೇಲರ್ ನಲ್ಲಿ ಆ ಜನರ ಬದುಕು ಬವಣೆ ಕಾಣಿಸುತ್ತಿದೆ. ಈಗಾಗಲೇ ಚಿತ್ರತಂಡವೇ ಹೇಳಿರುವಂತೆ, ಅದರ ಅಪ್ಡೇಟ್ ಗಳನ್ನ ನೋಡಿದಾಗ ತಿಳಿದಂತೆ ಈ ಸಿನಿಮಾ ನೈಜ ಘಟನೆಯಾಧಾರಿತ ಸಿನಿಮಾವಾಗಿದೆ. ದಿಡ್ಡಳ್ಳಿ ಜನರ ಹೋರಾಟ, ಹೋರಾಟದ ನಂತರದ ಅವರ ಬದುಕು ಇವುಗಳ ಸುತ್ತ ಬೆಳಕು ಚೆಲ್ಲಲಿದೆ ಕನ್ನೇರಿ ಸಿನಿಮಾ. ನೀನಾಸಂ ಮಂಜು ಸಿನಿಮಾಗಾಗಿ ಸಾಕಷ್ಟು ಹೋಂ ವರ್ಕ್ ಮಾಡಿ, ಡೈರೆಕ್ಟ್ ಮಾಡಿ, ಫೈನಲಿ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 4ರಂದು ಚಿತ್ರ ಪ್ರೇಕ್ಷಕರೆದುರು ತೆರೆದೆಕೊಳ್ಳಲಿದೆ.
ಕನ್ನೇರಿ.. ಈ ಸಿನಿಮಾ ಎಲ್ಲರ ಮನಸ್ಸಲ್ಲಿ ಈಗಾಗಲೇ ಅಚ್ಚೆ ಒತ್ತಿ ಕುಳಿತು ಬಿಟ್ಟಿದೆ. ಯಾಕಂದ್ರೆ ಈ ಸಿನಿಮಾದ ಒಳಗಿರುವ ಕಥೆಯ ಸ್ಟ್ರೆಂತ್ ಅಂಥದ್ದು. ಇದೀಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ. ಕಾಡಿನ ನಡುವೆ ಜೀವಿಸುವ ಜನ, ಹಚ್ಚ ಹಸಿರು, ಸೂರ್ಯನ ಕಿರಣ, ಒಟ್ಟಿಗೆ ಜೀವಿಸುತ್ತಿದ್ದ ಆ ಖುಷಿ, ದುಷ್ಟರ ಕಣ್ಣಿಗೆ ಬಿದ್ದಾಗ ಏನಾಗುತ್ತೆ, ನಗರ ಸೇರಿದ ಆ ಮಗುವಿನ ಪಾಡೇನು, ತಮ್ಮ ಸ್ವಾರ್ಥಕ್ಕೆ ಏನು ಅರಿಯದ ಹೆಣ್ಣು ಮಗಳನ್ನ ಹೇಗೆಲ್ಲಾ ಬಳಸಿಕೊಳ್ತಾರೆ ಇದೆಲ್ಲಾ ಟ್ರೇಲರ್ ನಲ್ಲಿ ಅಡಗಿದೆ. ಈಗಾಗಲೇ ಸಿನಿ ಪ್ರೇಮಿಗಳು ಕಮೆಂಟ್ ಸೆಕ್ಷನ್ ನಲ್ಲಿ ಸಿನಿಮಾಗಾಗಿ ವೈಟ್ ಮಾಡ್ತಿರುವ ಕಾತುರ ವ್ಯಕ್ತಪಡಿಸಿದ್ದಾರೆ. ಸಿನಿಮಾ ತಂಡಕ್ಕೆ ಬೆಸ್ಟ್ ವಿಶಸ್ ಕೂಡ ತಿಳಿಸಿದ್ದಾರೆ.
ನೈಜ ಹಾಗೂ ಮಹಿಳಾ ಪ್ರಧಾನ ಸಿನಿಮಾಗೆ ನೀನಾಸಂ ಮಂಜು ಕಮರ್ಶಿಯಲ್ ಟಚ್ ಕೊಟ್ಟಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡು, ರಿಲೀಸ್ ಗೆ ರೆಡಿಯಾಗಿರೋ ಕನ್ನೇರಿ, ಹಾಡು, ಟ್ರೇಲರ್ ಮೂಲಕವೇ ಎಲ್ಲರ ಮನ ಸೆಳೆಯುತ್ತಿದೆ. ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಹಾಗೂ ಕ್ಷೀರ ಸಾಗರ ಅವರ ಜೇನು: ಆಕಾಶದ ಅರಮನೆ ಕಾದಂಬರಿ ಸ್ಪೂರ್ತಿಯೊಂದಿಗೆ ಸಿನಿಮಾವನ್ನ ಹೆಣೆಯಲಾಗಿದೆ. ಅರ್ಚನಾ ಮಧುಸೂದನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ್ ಒಳಗೊಂಡ ಅನುಭವಿ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಪಕರು. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.