ಶಿವಮೊಗ್ಗ: ಪಕ್ಷಕ್ಕೆ ಇರುಸು-ಮುರುಸು ಉಂಟಾಗಬಾರದು ಎಂಬ ಕಾರಣಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಚಿವ ಸ್ಥಾನಕ್ಕೆ ಶುಕ್ರವಾರ ಸಂಜೆ ರಾಜೀನಾಮೆ ನೀಡುತ್ತೇನೆ. ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ಹಸ್ತಾಂತರಿಸುತ್ತೇನೆ ಎಂದು ಪ್ರಕಟಿಸಿದರು.
ರಾಜೀನಾಮೆ ನೀಡುವ ಬಗ್ಗೆ ಈ ಎಪಿಸೋಡ್ ಆರಂಭದಲ್ಲೇ ನಿರ್ಧಾರ ಮಾಡಿದ್ದೆ. ಆದರೆ ಪಕ್ಷದ ಹಿರಿಯರು ಬೇಡ ಎಂದು ಸೂಚನೆ ನೀಡಿದ್ದರು.
ನನಗೆ ಆಶೀರ್ವಾದ ಮಾಡುತ್ತಾ ಬಂದಿರುವ ಹಿರಿಯರಿಗೆ, ರಾಷ್ಟ್ರೀಯ ನಾಯಕರಿಗೆ ಇರುಸು-ಮುರುಸು ಆಗರಬಾರದು ಎಂಬ ಒಂದೇ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದು ಸ್ವಯಂ ತೆಗೆದುಕೊಂಡ ನಿರ್ಧಾರ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೇನೆ ಎಂದರು.
ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ. ಈ ಎಪಿಸೋಡಿನಲ್ಲಿ ನಿರ್ದೋಷಿಯಾಗಿ ಹೊರಬರುವ ಪೂರ್ಣ ವಿಶ್ವಾಸ ಇದೆ ಎಂದರು.