ಶಿವಮೊಗ್ಗ: ಜಾಗತೀಕರಣ- ಉದಾರೀಕರಣ, ಖಾಸಗೀಕರಣ ಪರಿಣಾಮ ನೌಕರರ ಮೇಲೂ ಆಗಿದೆ. ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ನಿಗದಿತ ಸಮಯದಲ್ಲಿ ಕೆಲಸ ಮಾಡಿದಲ್ಲಿ ಭ್ರಷ್ಟತೆ ಕಡಿಮೆಯಾಗುತ್ತದೆ. ಬದಲಾವಣೆ ಮಾಡೋಣ, ಬನ್ನಿ ಕೈ ಜೋಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ನೌಕರರಿಗೆ ದೇಶದಲ್ಲೇ ದಕ್ಷರು ಎಂಬ ಖ್ಯಾತಿ ಇದೆ. ನಮ್ಮ ಜವಾಬ್ದಾರಿ, ಕರ್ತವ್ಯದ ಮಹತ್ವ ಅರಿತು ಕೆಲಸ ಮಾಡಬೇಕು ಆಳುವುದು- ಆಡಳಿತ ನಡೆಸುವುದು ಬೇರೆ ಬೇರೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ಫಲ ಜನರಿಗೆ ತಲುಪಿಸಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನೆನಪಿಟ್ಟುಕೊಂಡು ಕೆಲಸ ಮಾಡಿ. ಸಾಮಾನ್ಯರಿಗೆ ನೆರವಾಗಲು ಕಾನೂನು ಉಲ್ಲಂಘಿಸಿದರೂ ತಪ್ಪಲ್ಲ ಎಂದರು.
2 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಆಡಳಿತ ಯಂತ್ರ ಸುಗಮವಾಗಿ ನಡೆಯುತ್ತಿದೆ. ಇದಕ್ಕಾಗಿ ಎಲ್ಲಾ ನೌಕರರಿಗೇ ಅಭಿನಂದನೆಗಳು. ಇದೆಲ್ಲಾ ದೇವರು ಕೊಟ್ಟಿರುವ ಅವಕಾಶ. ಕೂತಲ್ಲೇ ಖುರ್ಚಿ ಬಿಸಿ ಮಾಡಬೇಡಿ, ಜನರಿಗಾಗಿ ಕೆಲಸ ಮಾಡಿ. ಒಳ್ಳೆಯದಕ್ಕೆ ನಿಮ್ಮೊಂದಿಗೆ ಇರುತ್ತೇನೆ, ಯಾವುದೇ ಭ್ರಷ್ಟತೆಗೆ ಅವಕಾಶ ಇಲ್ಲ. ಆಡಳಿತದಲ್ಲಿ ದಕ್ಷತೆ ನಮ್ಮ ಶುದ್ಧತೆಯಿಂದ ಬರುತ್ತದೆ ಎಂದರು.