ಶಿವಮೊಗ್ಗ: ಕಳೆದ ನಾಲ್ಕು ದಿನಗಳಿಂದ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಶಾಂತವಾಗಿದ್ದು, ನಿಧಾನವಾಗಿ ಸಹಜಸ್ಥಿತಿಯತ್ತ ಮರಳುತ್ತಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ದುಷ್ಕರ್ಮಿಗಳ ಚಲನವಲನ ಗಮನಿಸಲು 7 ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ 4 ತಂಡಗಳನ್ನು ಕೇರಳ, ಮಂಡ್ಯ, ಉತ್ತರ ಕನ್ನಡ, ಕರಾವಳಿ ರಕ್ಷಣಾ ಪಡೆಯ 20ಕ್ಕೂ ಹೆಚ್ಚು ಪೊಲೀಸರ ತಂಡ ಆಗಮಿಸಿದ್ದು, ಶಿವಮೊಗ್ಗ ನಗರವನ್ನು ಗ್ರೌಂಡ್ ಕಣ್ಗಾವಲಲ್ಲಿ ಪರಿಶೀಲನೆ ಮಾಡಲಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾಧ್ಯಮದವರ ಜೊತೆ ಮಾತನಾಡಿ, ಪರಿಸ್ಥಿತಿ ಹತೋಟಿಯಲ್ಲಿದೆ. ಆದರೂ ಸಹ ಅಹಿತಕರ ಘಟನೆಗಳ ತಡೆಗೆ ಮತ್ತು ಪರಿಶೀಲಿಸಲು ರಾಜ್ಯದ ವಿವಿಧ ಕಡೆಗಳಿಂದ 7 ಡ್ರೋಣ್ ಕ್ಯಾಮೆರಾಗಳನ್ನು ತರಿಸಲಾಗಿದೆ. ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ. ಡ್ರೋಣ್ ಕ್ಯಾಮೆರಾಗಳನ್ನು ಎಲ್ಲೆಲ್ಲಿ ಬಳಸಬೇಕು ಎನ್ನುವುದನ್ನು ನಿರ್ಧರಿಸಲಾಗುವುದು. ಒಟ್ಟಾರೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಯುವಕ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಗಲಭೆ, ಗಲಾಟೆ, ವಾಹನಗಳಿಗೆ ಬೆಂಕಿ ಹಚ್ಚುವುದು, ಆಸ್ತಿಪಾಸ್ತಿ ನಷ್ಟ, ರಾಜಕೀಯ ಹೇಳಿಕೆಗಳಿಂದ ಹೈರಾಣಗೊಂಡಿದ್ದ ನಗರದ ಪರಿಸ್ಥಿತಿ ಈಗ ಹತೋಟಿಗೆ ಬಂದಿದೆ.
ಆದರೂ ಕೂಡ ಕರ್ಫ್ಯೂವನ್ನು ಮತ್ತೆರಡು ದಿನಗಳ ಕಾಲ ಮುಂದುವರೆಸಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕರ್ಫ್ಯೂ ವಿಧಿಸಿದ್ದರಿಂದ ಇಡೀ ಶಿವಮೊಗ್ಗ ನಗರದಲ್ಲಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಮೆಡಿಕಲ್ ಶಾಪ್, ಆಸ್ಪತ್ರೆ, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ, ಕೆಲವು ಹೊಟೆಲ್ ಗಳನ್ನು ಬಿಟ್ಟರೆ ಮತ್ಯಾವುದೇ ರೀತಿಯ ಅಂಗಡಿಗಳು ತೆರೆದಿರಲಿಲ್ಲ.
ಗಾಂಧಿ ಬಜಾರ್, ಎನ್.ಟಿ. ರಸ್ತೆ, ಓ.ಟಿ. ರಸ್ತೆ, ಸೀಗೇಹಟ್ಟಿ, ಲಷ್ಕರ್ ಮೊಹಲ್ಲಾ, ಕ್ಲಾರ್ಕ್ ಪೇಟೆ, ಭಾರತೀ ಕಾಲೋನಿ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಜನರ ಓಡಾಟವೇ ಇರಲಿಲ್ಲ. ಸಾರ್ವಜನಿಕರು ಮನೆಯಿಂದ ಹೊರಬರುತ್ತಿರಲಿಲ್ಲ. ಪೊಲೀಸ್ ವಾಹನಗಳ ಓಡಾಟ ಬಿಟ್ಟರೆ ಹಳೆ ಶಿವಮೊಗ್ಗ ಭಾಗದಲ್ಲಿ ಸಂಪೂರ್ಣ ಬಂದ್ ವಾತಾವರಣ ಇತ್ತು.
ದುರ್ಗಿಗುಡಿ, ಕುವೆಂಪುರಸ್ತೆ, ಸವಳಂಗರಸ್ತೆ, ಆಲುಕೊಳ ರಸ್ತೆ, ಮುಂತಾದಕಡೆ ಜನರ ಓಡಾಟ ವಿರಳವಾಗಿತ್ತು. ಅಗತ್ಯ ಕೆಲಸಗಳಿಗಷ್ಟೇ ದ್ವಿಚಕ್ರವಾಹನ ಸವಾರರು ಪ್ರಯಾಣಿಸುತ್ತಿದ್ದುದು ಕಂಡುಬಂದಿತು. ಕೆಲ ಆಟೋಗಳ ಸಂಚಾರ ವಿದ್ದಿದ್ದರಿಂದ
ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಅಲ್ಲಲ್ಲಿ ಟೀ ಗೂಡಂಗಡಿಗಳು ತೆರೆದಿದ್ದು ಕಂಡುಬಂದಿತು. ಒಟ್ಟಾರೆ ಇಡೀ ಶಿವಮೊಗ್ಗ ನಗರ ಶಾಂತ ಸ್ಥಿತಿಯತ್ತ ಸಾಗಿರುವುದು ಕಂಡುಬಂದಿದೆ.