ಶಿವಮೊಗ್ಗ : ಮಹಿಳೆಯರು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳು, ಒಲಂಪಿಕ್ ಕ್ರೀಡೆಗಳು, ಶಿಕ್ಷಣ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಕೆನರಾ ಜ್ಯೋತಿ ಯೋಜನೆಯಡಿ ಶಿಷ್ಯವೇತನ ಪಡೆದ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ತಮ್ಮದೇ ಆದ ಸಾಧನೆ ಮೂಲಕ ಹೊರಹೊಮ್ಮಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ವಿದ್ಯಾರ್ಥಿನಿಯರಿಗೆ ಹಾರೈಸಿದರು.
ಕೆನರಾ ಬ್ಯಾಂಕ್ ಕಟ್ಟಡದಲ್ಲಿರುವ ಲೀಡ್ ಬ್ಯಾಂಕ್ ಕಾನ್ಫರೆನ್ಸ್ ಹಾಲ್ನಲ್ಲಿ ಕೆನರಾ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಂಗವಾದ ಕೆನರಾ ವಿದ್ಯಾಜ್ಯೋತಿ ಯೋಜನೆಯಡಿ ಎಸ್ಸಿ/ಎಸ್ಟಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಸೌಲಭ್ಯ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಸೌಲಭ್ಯ ವಿತರಣೆ ಮಾಡಿ ಮಾತನಾಡಿದರು.
ಬ್ಯಾಂಕಿನ ಲಾಭದಲ್ಲಿ ಸಿಎಸ್ಆರ್ ನಿಧಿ ಮೂಲಕ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗುವಂತಹ ಶಿಷ್ಯವೇತನ ಯೋಜನೆ ಮೂಲಕ ಹಿಂದುಳಿದ ವರ್ಗದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಶಿಷ್ಯವೇತನ ನೀಡುವ ಮೂಲಕ ಕೆನರಾ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತಿದೆ. ಪ್ರಸ್ತುತ ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಸರ್ಕಾರ ಸಾಕಷ್ಟು ಖರ್ಚು ಮಾಡುತ್ತಿದೆ. ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಅನೇಕ ವಸತಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.
ನಾವೆಲ್ಲಾ ನಮ್ಮ ಹಿರಿಯರು ಓದಿದ ಪಠ್ಯವನ್ನೇ ಓದಿದೆವು. ಆದರೆ ಈಗ ಹೊಸ ಶಿಕ್ಷಣ ನೀತಿಯನ್ವಯ ಪಠ್ಯ ಬದಲಾವಣೆ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಹೊಸ ಶಿಕ್ಷಣ ನೀತಿಯ ಅಗತ್ಯತೆ ಇದ್ದು, ಎಲ್ಲರೂ ಈ ಕಡೆ ಗಮನ ಹರಿಸಬೇಕು ಎಂದರು.ಮಹಿಳೆಯರು ಪ್ರಸ್ತುತದಲ್ಲಿ ಎಲ್ಲ ಕ್ಷೇತ್ರದಲ್ಲಿ ಉತ್ತಮ ಸ್ಪರ್ಧೆ ನೀಡುತ್ತಿದ್ದಾರೆ. ಉದಾಹರಣೆಗೆ 2019 ರ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಟಾಪ್ 10 ರ್ಯಾಂಕುಗಳು ಹೆಣ್ಣುಮಕ್ಕಳೇ ಪಡೆದಿರುವುದು ಹಾಗೂ ಒಲಂಪಿಕ್ಸ್ ಕ್ರೀಡೆಗಳಲ್ಲಿ ನಮ್ಮ ದೇಶದ ಹೆಣ್ಣುಮಕ್ಕಳು ಮಾಡಿರುವ ಸಾಧನೆ ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಶ್ಲಾಘಿಸಿದ ಅವರು ಎಲ್ಲೆಡೆ ನಾವು ಪುರುಷ ಸಾಧಕರ ಪ್ರತಿಮೆಯನ್ನೇ ಕಾಣುತ್ತೇವೆ, ಆದರೆ ಶಿಕಾರಿಪುರ ತಾಲ್ಲೂಕಿನ ಉಡುಗಣಿಯಲ್ಲಿ ಪ್ರಥಮ ಕವಿಯತ್ರಿ, ವಚನಗಾರ್ತಿ ಅಕ್ಕಮಹಾದೇವಿಯವರ 75 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, 12 ನೇ ಶತಮಾನದ ಇತಿಹಾಸ ಸಾರುವ ಯೋಜನೆಯು ಪ್ರಗತಿಯಲ್ಲಿದೆ. ಇನ್ನು ವರ್ಷದಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದರು.ಕೆನರಾ ಬ್ಯಾಂಕ್ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರ್ಕಾರದ ಯೋಜನೆಗಳು, ಎಂಎಸ್ಎಂಇ ಇತರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಾ ಉತ್ತಮ ಸೇವೆ ನೀಡುತ್ತಿವೆ. ಆದರೆ ಬ್ಯಾಂಕಿಗೆ ದಾಖಲಾತಿಗಳನ್ನು ಸಲ್ಲಿಸುವುದು ಸ್ವಲ್ಪ ಕಷ್ಟವೇ ಆಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೇವೆ ಸಲ್ಲಿಸಬೇಕೆಂದರು.
ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಶ್ಲಾಘನೀಯ : ಸಂಸದ ಬಿ.ವೈ.ರಾಘವೇಂದ್ರ ಎಸ್ಸಿ/ಎಸ್ಟಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಸೌಲಭ್ಯ ವಿತರಣೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.