ಶಿವಮೊಗ್ಗ: ನಗರದ ಬೊಮ್ಮನಕಟ್ಟೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಪೈಂಟಿಂಗ್ ಕೆಲಸಗಾರ ಗಣೇಶ್(38) ಮೃತಪಟ್ಟವರು ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ವಿನೋಬನಗರ ಕಡೆಯಿಂದ ಬೊಮ್ಮನಕಟ್ಟೆ ಎ ಬ್ಲಾಕ್ ನ ಮೈಲಮ್ಮ ದೇವಸ್ಥಾನದ ಬಳಿ ಇರುವ ತನ್ನ ಮನೆಗೆ ತೆರಳುವಾಗ ಮಮತಾ ಲೇಔಟ್ ಬಳಿ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಆ ಬೈಕ್ ನಲ್ಲಿ ಮೂವರು ಸಂಚರಿಸುತ್ತಿದ್ದರು ಎನ್ನಲಾಗಿದೆ. ಬೈಕ್ ಡಿಕ್ಕಿಯಾದ ರಭಸಕ್ಕೆ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿನೋಬನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತ್ರಿಬಲ್ ರೈಡಿಂಗ್ ಮಾಡುತ್ತಿದ್ದ ಮೂವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.